ಕೊರೊನಾ ಪತ್ತೆಗೆ ಮನೆ ಮನೆ ಸಮೀಕ್ಷೆ
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶೆಟ್ಟಣ್ಣವರ ಸೂಚನೆ ! ಪಾಸಿಟಿವ್ ಮನೆಗಳಿಗೆ ಸ್ಟಿಕ್ಕರ್
Team Udayavani, May 19, 2021, 4:07 PM IST
ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಸಮುದಾಯಕ್ಕೆ ಹರಡಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ಆರಂಭಿಸಬೇಕೆಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಮನೆ ಮನೆ ಸಮೀಕ್ಷೆ ಕಾರ್ಯಕ್ಕೆ ತಂಡಗಳನ್ನು ರಚಿಸಿಕೊಂಡು ವಾರ್ಡ್ವಾರು ಸಮೀಕ್ಷೆ ಆರಂಭಿಸಬೇಕು. ಐದಕ್ಕಿಂತ ಹೆಚ್ಚಿನ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಪ್ರದೇಶದಿಂದ ಸಮೀಕ್ಷೆ ಆರಂಭಿಸಿ, ಎರಡು ದಿನಗಳೊಳಗಾಗಿ ವರದಿ ನೀಡಬೇಕೆಂದು ಆದೇಶಿಸಿದರು.
ಪಾಸಿಟಿವ್ ವರದಿ ಬಂದ ತಕ್ಷಣ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ಚುರುಕುಗೊಳಿಸಬೇಕು. ತಪಾಸಣೆಗೊಳಪಡಿಸಬೇಕು. ತಪಾಸಣೆ ಸಂದರ್ಭದಲ್ಲಿ ಶೇ.40ರಷ್ಟು ರ್ಯಾಪಿಡ್ ಹಾಗೂ ಶೇ.60ರಷ್ಟು ಆರ್ಟಿಪಿಸಿಆರ್ ತಪಾಸಣೆಗೆ ಒಳಪಡಿಸಬೇಕು. ರ್ಯಾಪಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರನ್ನು ಪುನಃ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕೆಂದು ಸೂಚನೆ ನೀಡಿದರು. ಕೋಮಾರ್ಬಿಡಿಟಿ(ತೀವ್ರ ಸ್ವರೂಪದ ಅನ್ನ ಕಾಯಿಲೆಯಿಂದ ಬಳಲುತ್ತಿರುವವರು) ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೋಂ ಐಸೋಲೇಷನ್ ಮಾಡುವ ಮೊದಲು ಕೋವಿಡ್ ಆರೈಕೆ ಕೇಂದ್ರ(ಸಿಸಿಸಿ)ಗಳಿಗೆ ದಾಖಲಿಸಬೇಕು.
ಪರೀಕ್ಷೆಗೊಳಪಡಿಸಿ ಅಗತ್ಯ ಔಷಧೋಪಚಾರದ ನಂತರ ಅವರ ಪರಿಸ್ಥಿತಿ ನೋಡಿಕೊಂಡು ಮನೆ ಬಿಟ್ಟು ಹೋಗದಂತೆ ಹಾಗೂ ಕೋವಿಡ್ ಹೋಂ ಐಸೋಲೇಷನ್ ನಿಯಮಾವಳಿ ಪಾಲಿಸುವ ಕರಾರು ಪತ್ರ ಬರೆಸಿಕೊಂಡು ಕಳುಹಿಸಬೇಕು. 90ಕ್ಕಿಂತ ಕಡಿಮೆ ಪಲ್ಸ್ರೇಟ್ ಇರುವವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲು ಕ್ರಮ ವಹಿಸಬೇಕು. ಮೂಲ ಹಂತದಲ್ಲೇ ಸೋಂಕು ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.
ಸಿಸಿಸಿಗೆ ಪೊಲೀಸ್ ಬಂದೋಬಸ್ತ್: ಕೋವಿಡ್ ಕೇರ್ ಸೆಂಟರ್ಗಳನ್ನಾಗಿ ಪರಿವರ್ತಿಸಲಾಗಿರುವ ವಿವಿಧ ಇಲಾಖೆಯ ವಿದ್ಯಾರ್ಥಿ ನಿಲಯಗಳನ್ನು ಆಯಾ ಇಲಾಖೆಯ ಮುಖ್ಯಸ್ಥರು ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮ ವಹಿಸಬೇಕು. ಕೋವಿಡ್ ಕೇರ್ ಸೆಂಟರ್ನಲ್ಲಿ ದಾಖಲಾದ ಸೋಂಕಿತರು ಹೊರಗೆ ಹೋಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ಕೇರ್ ಸೆಂಟರ್ಗಳಿಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಬೇಕು.
ಆಸ್ಪತ್ರೆಯಲ್ಲಿ ಸುಧಾರಿಸಿಕೊಂಡವರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಕಳುಹಿಸಿ, ಅಗತ್ಯ ವೈದ್ಯಕೀಯ ಉಪಚಾರ ಕಲ್ಪಿಸಬೇಕು ಎಂದರು. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಕಡಿಮೆ ಇದ್ದರೂ ಕೋವಿಡ್ನಿಂದ ಮರಣ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯ ಸೋಂಕಿತರನ್ನು ಬೇರೆ ಜಿಲ್ಲೆಗಳ ಆಸ್ಪತ್ರೆಗೆ ಕಳುಹಿಸುವ ಮೊದಲು ಅಲ್ಲಿ ಬೆಡ್ ವ್ಯವಸ್ಥೆ ಇದೆಯೇ ಎಂಬ ಪೂರ್ವ ಮಾಹಿತಿ ಪಡೆದು ರೋಗಿಗಳನ್ನು ದಾಖಲಿಸುವ ಕೆಲಸವಾಗಬೇಕು. ಅಕ್ಕಪಕ್ಕದ ಜಿಲ್ಲೆಗಳಲ್ಲೂ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಬೆಡ್ಗಳು ದೊರೆಯದೆ ಜಿಲ್ಲೆಯ ಸೋಂಕಿತರಿಗೆ ತೊಂದರೆಯಾಗಬಾರದು ಎಂದು ಸಲಹೆ ನೀಡಿದರು.
ಎಲ್ಲ ಇಲಾಖಾ ಸಿಬ್ಬಂದಿ ಬಳಕೆ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಮಾನವ ಸಂಪನ್ಮೂಲ ಕೊರತೆಯನ್ನು ಸರಿದೂಗಿಸಲು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯನ್ನು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪಾಳೆ ಪ್ರಕಾರ ಕರ್ತವ್ಯಕ್ಕೆ ನಿಯೋಜಿಸುವಂತೆ ಸಲಹೆ ನೀಡಿದರು. ವೈದ್ಯಕೀಯೇತರ ಕೋವಿಡ್ ನಿಯಂತ್ರಣ ಚಟುವಟಿಕೆಗೆ 36ಇಲಾಖೆ ಸಿಬ್ಬಂದಿಯನ್ನು ಬಳಸಿಕೊಂಡು ಕೋವಿಡ್ ಹತೋಟಿಗೆ ಕಾರ್ಯೋನ್ಮುಖರಾಗಬೇಕೆಂದರು.
ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಮಾತನಾಡಿ, ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಬೇಕು ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ|ಜಯಾನಂದ ಹಾಗೂ ಸಹಾಯಕ ಔಷಧ ನಿಯಂತ್ರಕಿ ನೀಲಿಮಾ ಅವರು ಕೋವಿಡ್ ಮಾರ್ಗಸೂಚಿಗಳು, ವೈದ್ಯಕೀಯ ಚಿಕಿತ್ಸೆ, ಆಕ್ಸಿಜನ್ ಸರಬರಾಜಿನ ಮಾಹಿತಿಯನ್ನು ಸಭೆಗೆ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್, ಉಪವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ, ಅನ್ನಪೂರ್ಣಾ ಮುದಕಮ್ಮನವರ, ಎಲ್ಲ ತಾಲೂಕು ತಹಶೀಲ್ದಾರ್ರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
MUST WATCH
ಹೊಸ ಸೇರ್ಪಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!