ನಾಳೆಯಿಂದ ಗ್ರಾಮಗಳಲ್ಲಿ ಕೂಲಿ ಕೆಲಸ ಲಭ್ಯ
ನರೇಗಾ ಯೋಜನೆಯ "ದುಡಿಯೋಣ ಬಾ' ಅಭಿಯಾನದಡಿ ಕಾರ್ಯಕ್ರಮ: ಜಿಪಂ ಸಿಇಒ ಮಹಮ್ಮದ ರೋಷನ್
Team Udayavani, Mar 31, 2022, 4:32 PM IST
ಹಾವೇರಿ: ನರೇಗಾ ಯೋಜನೆಯ “ದುಡಿಯೋಣ ಬಾ’ ಅಭಿಯಾನದಡಿ ಏಪ್ರಿಲ್ 1 ರಿಂದ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಕೂಲಿ ಕೆಲಸ ನೀಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ತಿಳಿಸಿದ್ದಾರೆ.
ಬೇಸಿಗೆ ಸಮಯದಲ್ಲಿ ಸತತ ಮೂರು ತಿಂಗಳು ಅಕುಶಲ(ಕೂಲಿ) ಕೆಲಸ ನೀಡಲಾಗುವುದು. ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಗಟ್ಟಲು ಗ್ರಾಮದ ಬಡ ಕೂಲಿ ಕಾರ್ಮಿಕರು, ಕೆಲಸದ ಬೇಡಿಕೆಯನ್ನು ನಮೂನೆ-6ನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿದ ತಕ್ಷಣ ಸ್ವ ಗ್ರಾಮದಲ್ಲಿಯೇ ಕೂಲಿ ಕೆಲಸ ನೀಡಲಾಗುವುದು.
ಕೇಂದ್ರ ಸರ್ಕಾರದಿಂದ 2022-23ನೇ ಸಾಲಿಗೆ ಪ್ರತಿ ದಿನದ ಕೂಲಿ ಹಣವನ್ನು 289ರೂ. ನಿಂದ 309 ರೂ.ಗೆ ಹೆಚ್ಚಿಸಿ ಆದೇಶಿಸಿದೆ. ಜಿಲ್ಲೆಯ ಎಲ್ಲ ಗ್ರಾಮೀಣ ಭಾಗದ ಕೂಲಿಕಾರರಿಗೆ ಹೆಚ್ಚಿನ ಕೂಲಿ ದೊರಕುವುದರ ಜೊತೆಗೆ ತಮ್ಮ ಗ್ರಾಮದಲ್ಲಿ ಉದ್ಯೋಗ ಪಡೆಯಬಹುದು. ಏಪ್ರಿಲ್ 1ರಿಂದ ಪ್ರತಿ ಗ್ರಾಮದಲ್ಲಿ 50 ವೈಯಕ್ತಿಕ ಕಾಮಗಾರಿಗಳಿಗೆ ಹಾಗೂ ಕನಿಷ್ಟ 3 ಸಮುದಾಯ ಕಾಮಗಾರಿಗಳನ್ನು ಆರಂಭಿಸಲು ಆದೇಶಿಸಲಾಗಿದ್ದು, ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳಿಗೆ ಎನ್ಎಂಆರ್ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಬಡ ಕೂಲಿ ಕಾರ್ಮಿಕರಿಗೆ ನಿರಂತರ ಕೂಲಿ ಕೆಲಸ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಸಮಗ್ರ ಕೆರೆ ಅಭಿವೃದ್ಧಿ: ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಃಶ್ಚೇತನ, ಕೆರೆ ಹೂಳು ತೆಗೆಯುವುದು, ಕೆರೆ ಏರಿ ಮತ್ತು ಕೋಡಿ ದುರಸ್ತಿ, ರೈತರ ಜಮೀನುಗಳಿಗೆ ನೀರು ಹರಿದು ಹೋಗುವ ಕಾಲುವೆಗಳ ಪುನಃಶ್ಚೇತನ ಮತ್ತು ಕೆರೆ ಅಂಚಿನಲ್ಲಿ ಅರಣ್ಯೀಕರಣ ಕಾಮಗಾರಿಗಳಾಗಿವೆ.
ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ, ರೈತರ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಮುಂಗಡ ಗುಂಡಿ ತೆಗೆಯುವ ಕಾಮಗಾರಿಗಳು, ಬೋರ್ವೆಲ್ ರಿಚಾರ್ಜ್ ಕಾಮಗಾರಿಗಳು, ಬದು ನಿರ್ಮಾಣ ಕಾಮಗಾರಿಗಳು. ಕೃಷಿ ಹೊಂಡ ನಿರ್ಮಾಣ ಮತ್ತು ಇತರೆ ಕಾಮಗಾರಿಗಳನ್ನು ಪಡೆಯಬಹುದು.
ಪ್ರಥಮ ಆದ್ಯತೆ ವೈಯಕ್ತಿಕ ಕಾಮಗಾರಿಗಳು ಮತ್ತು ಸಮುದಾಯ ಕಾಮಗಾರಿಗಳಿಗೆ ಗುಂಪು ಗುಂಪಾಗಿ ಜನರಿಗೆ ಕೂಲಿ ಕೆಲಸ ಒದಗಿಸುವುದು, ವಲಸೆ ತಡೆಯುವುದು ಯೋಜನೆಯ ಮತ್ತು ದುಡಿಯೋಣ ಬಾ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
2022-23ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ವಿಶೇಷತೆ ಎಂದರೆ, ಗ್ರಾಮೀಣ ಭಾಗದ ಮಹಿಳೆಯರನ್ನು ಹೆಚ್ಚು ಹೆಚ್ಚಾಗಿ ಭಾಗವಹಿಸುವಂತೆ ಮಾಡಲು ಈಗಾಗಲೇ ಸಂಜೀವಿನಿ ಮಹಿಳಾ ಸ್ವ-ಸಹಾಯಕ ಸಂಘದ ಸದಸ್ಯರಿಗೆ ಒಂದು ದಿನ ತರಬೇತಿ ನೀಡಲಾಗಿದ್ದು, ಯೋಜನೆಯಡಿ ಕೆಲಸ ಪಡೆದು ಸ್ವಾವಲಂಬಿ ಬದುಕಿಗಾಗಿ ಮತ್ತು ವೈಯಕ್ತಿಕ ಆದಾಯವನ್ನು ಹೆಚ್ಚಿಸುವುದು ಯೋಜನೆಯ ಗುರಿಯಾಗಿದೆ. ಹಾಗಾದರೆ, ನಿಮ್ಮ ಗ್ರಾಮದಲ್ಲಿ ಕೂಲಿ ಕೆಲಸ ಪಡೆಯಲು ಹಾಗೂ ಕಾಮಗಾರಿಗಳ ಬಗ್ಗೆ ಮಾಹಿತಿ ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಥವಾ ಉಚಿತ ಸಹಾಯವಾಣಿ 1800-4258-666ಕ್ಕೆ ಕೆರೆ ಮಾಡಿ ಕೆಲಸ ಪಡೆಯಬೇಕೆಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ 2022-23ನೇ ಸಾಲಿಗೆ ಪ್ರತಿ ದಿನದ ಕೂಲಿ ಹಣವನ್ನು 289ರೂ.ನಿಂದ 309 ರೂ.ಗೆ ಹೆಚ್ಚಿಸಿ ಆದೇಶಿಸಲಾಗಿದೆ. ಇದರಿಂದ ಜಿಲ್ಲೆಯ ಎಲ್ಲ ಗ್ರಾಮೀಣ ಭಾಗದ ಕೂಲಿಕಾರರಿಗೆ ಹೆಚ್ಚಿನ ಕೂಲಿ ದೊರಕುವುದರ ಜೊತೆಗೆ ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಪಡೆಯಬಹುದಾಗಿದೆ.
-ಮಹಮ್ಮದ್ ರೋಷನ್, ಜಿಪಂ ಸಿಇಒ