ಕೇಂದ್ರದಿಂದ ಪ್ಯಾಕೇಜ್ ಭರವಸೆ
Team Udayavani, Apr 25, 2020, 4:16 PM IST
ಹಾವೇರಿ: ಲಾಕ್ಡೌನ್ ಮುಗಿದ ಬಳಿಕ ಕೇಂದ್ರ ಸರ್ಕಾರದಿಂದ ಕೃಷಿ ಸೇರಿದಂತೆ ಎಲ್ಲ ರಂಗಗಳ ಅಭಿವೃದ್ಧಿಗೆ ಬಹುದೊಡ್ಡ ಪ್ಯಾಕೇಜ್ ಘೋಷಣೆಯಾಗುವ ಭರವಸೆ ಇದೆ ಎಂದು ಸಂಸದ ಶಿವಕುಮಾರ ಉದಾಸಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತರ ಸಾಲದ ಕಂತುಗಳನ್ನು ಮೂರು ತಿಂಗಳು ಮುಂದೂಡುವ ಕುರಿತಂತೆ ಈಗಾಗಲೇ ಚರ್ಚಿಸಲಾಗಿದೆ. ಲಾಕ್ಡೌನ್ ನಿಂದ ಮೆಣಸಿನಕಾಯಿ ವ್ಯಾಪಾರಿ ಗಳು, ದಲ್ಲಾಳಿಗಳಿಗೆ ಉಂಟಾಗಿರುವ ತೊಂದರೆ ಕುರಿತಂತೆ ಈಗಾಗಲೇ ಚರ್ಚಿಸಲಾಗಿದೆ. ಬ್ಯಾಂಕ್ಗಳೊಂದಿಗೆ ಚರ್ಚಿಸಿ ಒಒಡಿ ನೀಡುವಂತೆ ಸಲಹೆ ಮಾಡಲಾಗಿದೆ. ಬ್ಯಾಡಗಿ ಮಾರುಕಟ್ಟೆಗೆ ಹೊರರಾಜ್ಯಗಳಿಂದ ಬರುವ ಚಾಲಕರು, ಹಮಾಲರಿಗೆ ವೈದ್ಯಕೀಯ ತಪಾಸಣೆ ತೀವ್ರಗೊಳಿಸಲು ಸೂಚನೆ ನೀಡಲಾಗಿದೆ. ಉದ್ಯೋಗ ಖಾತ್ರಿಯಡಿ ಮೊದಲ ಪ್ಯಾಕೇಜ್ನಲ್ಲಿ 53 ಸಾವಿರ ಜನರಿಗೆ ಉದ್ಯೋಗ ನೀಡಿ ಕೂಲಿ ಪಾವತಿಸಲಾಗಿದೆ. ಶೇ.94.94 ಕಾರ್ಡ್ ದಾರರಿಗೆ ಪಡಿತರ ವಿತರಿಸಲಾಗಿದೆ. 39,878 ಜನರಿಗೆ ಉಜ್ವಲ ಸಿಲಿಂಡರ್ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 1041 ವಾಹನಗಳನ್ನು ಸೀಜ್ ಮಾಡಿದ್ದು, 37,96,100 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.
ಮೆಕ್ಕೆಜೋಳ ಬೆಂಬಲ ಬೆಲೆಯಡಿ ಖರೀದಿ ಕುರಿತಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಗೋವಿನಜೋಳ ಹೆಚ್ಚು ಬೆಳೆಯುವ ಹಾವೇರಿ, ದಾವಣಗೆರೆ, ಗದಗ, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ರೈತರಿಂದ ಬೆಂಬಲ ಬೆಲೆಯಡಿ ಖರೀದಿಗೆ ವಿಶೇಷ ಪ್ಯಾಕೇಜ್ಗೆ ಮನವಿ ಮಾಡಿಕೊಳ್ಳಲಾಗಿದೆ. -ಶಿವಕುಮಾರ ಉದಾಸಿ, ಸಂಸದ