ಯುಗಾದಿ ಆಚರಣೆಗೆ ಜಿಲ್ಲಾದ್ಯಂತ ಸಿದ್ಧತೆ
Team Udayavani, Apr 13, 2021, 12:13 PM IST
ಹಾವೇರಿ: ಕೋವಿಡ್ ಎರಡನೇ ಅಲೆಯ ಭೀತಿಯ ನಡುವೆಯೇ ಹಿಂದೂಗಳಹೊಸ ವರ್ಷವಾದ ಯುಗಾದಿ ಹಬ್ಬದ ಆಚರಣೆಗೆ ಜಿಲ್ಲೆಯಾದ್ಯಂತ ಸಿದ್ಧತೆ ನಡೆದಿದೆ.
ಬಸ್ ಮುಷ್ಕರದಿಂದ ಗ್ರಾಮೀಣ ಭಾಗದಿಂದ ಬರುವ ಜನರಿಗೆ ಸಮಸ್ಯೆಯಾಗಿ ಟಂಟಂ, ಟ್ರ್ಯಾಕ್ಸ್, ಬೈಕ್ಗಳ ಮೂಲಕ ನಗರಕ್ಕೆ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದರು.
ಜಿಲ್ಲೆಯಲ್ಲಿ ಯುಗಾದಿ ಹಬ್ಬದಂದುರೈತರು ಭೂತಾಯಿಗೆ ವಿಶೇಷ ಪೂಜೆಸಲ್ಲಿಸಿ, ಭೂಮಿ ಉಳುಮೆ ಚಾಲನೆ ನೀಡುವುದು ವಿಶೇಷ. ಮುಂಗಾರುಹಂಗಾಮಿಗೆ ನೇಗಿಲು ಹೊಡೆಯುವ ಮೂಲಕ ಹೊಸ ಉಳುಮೆ ಆರಂಭಿಸುವರು. ಇದರ ಜೊತೆಗೆ ಹೊಸ ಜಮೀನು ಖರೀದಿ, ಲಾವಣಿ ಹಾಕುವ ಕಾಗದಪತ್ರ ಹಬ್ಬದಂದೇ ಹೆಚ್ಚಾಗಿ ಮಾಡಿಸುತ್ತಾರೆ.
ಹಬ್ಬದ ದಿನ ಬೆಳಗ್ಗೆ ಎತ್ತುಗಳನ್ನು ಸಿಂಗರಿಸಿ ನೇಗಿಲು, ಕುಂಟೆಯೊಂದಿಗೆಜಮೀನಿಗೆ ತೆರಳಿ ಕೃಷಿ ಚಟುವಟಿಕೆ ಆರಂಭಿಸುವರು. ಈ ವರ್ಷ ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವರು. ಯುಗಾದಿ ಹಬ್ಬದಂದು ಹೊಲಗಳಲ್ಲಿ ಉಳುಮೆ ಕಾರ್ಯ ಮಾಡಿದರೆ ವರ್ಷಪೂರ್ತಿ ಉತ್ತಮವಾದ ಮಳೆ, ಬೆಳೆ ಬರುತ್ತದೆ ಎಂಬ ನಂಬಿಕೆಯಿದೆ. ಚಂದ್ರಮಾನ ಯುಗಾದಿಯಂದು ಜನತೆ ಹೊಸಬಟ್ಟೆಗಳನ್ನು ಧರಿಸಿ ಚಂದ್ರದರ್ಶನ ಮಾಡಿ ನಮನ ಸಲ್ಲಿಸುವುದು ವಿಶೇಷ.
ಸಾಮಾಜಿಕ ಅಂತರ ನಿರ್ಲಕ್ಷ್ಯ:
ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಎರಡನೇ ಅಲೆಯ ಆತಂಕ ಸೃಷ್ಟಿಸಿದ್ದು, ಈ ನಡುವೆ ಸಾರ್ವಜನಿಕರು ಸರ್ಕಾರದ ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಸೋಮವಾರ ಮಾರುಕಟ್ಟೆಯಲ್ಲಿ ಕಂಡು ಬಂದಿತು. ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಮರೆಯುತ್ತಾ ಉದಾಸೀನತೆಯಿಂದ ವರ್ತಿಸುತ್ತಿದ್ದಾರೆ. ಅಲ್ಲದೇ ಕೇವಲು ಮಾಸ್ಕ್ ಗಳನ್ನು ಮುಖಕ್ಕೆ ಧರಿಸುವ ಬದಲು ಕೊರಳಿಗೆ ಹಾಕಿಕೊಂಡು ಸಂಚಾರ ಮಾಡುತ್ತಿರುವುದು ಕಂಡು ಬಂದಿತು. ಇದರಿಂದ ಕೋವಿಡ್ ಎರಡನೇ ಅಲೆ ಮತ್ತಷ್ಟು ಹರಡುವ ಸಾಧ್ಯತೆ ಇದ್ದು, ಜನರು ಜಾಗೃತಿ ವಹಿಸಬೇಕಾಗಿದೆ. ಜಿಲ್ಲಾಡಳಿತ ಈಗಾಗಲೇ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಸಾರ್ವಜನಿಕರು ಮಾತ್ರ ನಿರ್ಲಕ್ಷ್ಯ ತೋರುತ್ತಿರುವುದು ಆತಂಕ ಸೃಷ್ಟಿ ಮಾಡುತ್ತಿದೆ.