ಹೊಸ ತಾಲೂಕು; ಹಳೆ ಸಮಸ್ಯೆ…
ಚಿಟಗುಪ್ಪ ಪ್ರಮಾಣಪತ್ರಕ್ಕೆ ಸೀಮಿತ
Team Udayavani, Sep 28, 2019, 11:42 AM IST
ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಚಿಟಗುಪ್ಪ ತಾಲೂಕು ಘೋಷಣೆಯಾದ 5 ವರ್ಷಗಳ ನಂತರ ಉದ್ಘಾಟನೆಗೊಂಡ ವಿವಿಧ ಇಲಾಖೆ ಕಚೇರಿಗಳು ಕೇವಲ ನಾಮಫಲಕಕ್ಕೆ ಸೀಮಿತಗೊಂಡಿದ್ದು, ವಿವಿಧ
ಕೆಲಸಗಳಿಗಾಗಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಜನರ ಪರದಾಟ ಮಾತ್ರ ತಪ್ಪಿಲ್ಲ.
ಸರ್ಕಾರದ 33 ಇಲಾಖೆಗಳ ಪೈಕಿ ಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕರ್ತವ್ಯ ನಿರ್ವಹಣೆಗಾಗಿ ಸರ್ಕಾರ ಅಧಿಕೃತ ಆದೇಶ ನೀಡಿದೆ. ಈ ಎರಡು ಕಚೇರಿಗಳಲ್ಲೂ ಅಗತ್ಯಕ್ಕೆ ತಕ್ಕಷ್ಟು ಕಾಯಂ ಸಿಬ್ಬಂದಿ ಈಗಲೂ ನಿಯೋಜನೆ ಮಾಡಿಲ್ಲ.
ಉಳಿದಂತೆ ಶಿಕ್ಷಣ, ಸಮಾಜ ಕಲ್ಯಾಣ, ಬಿಸಿಎಂ, ತೋಟಗಾರಿಕೆ, ಅರಣ್ಯ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್, ಲೋಕೋಪಯೋಗಿ ಇಲಾಖೆ, ಖಜಾನೆ, ಉಪನೋಂದಣಿ, ಎಪಿಎಂಸಿ, ಸರ್ಕಾರಿ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಿಆರ್ಸಿ ಸೇರಿದಂತೆ ಇನ್ನುಳಿದ ಕಚೇರಿಗಳು ಚಿಟಗುಪ್ಪದ ಹಳೆಯ ಕಟ್ಟಡಗಳಲ್ಲಿ ಕೇವಲ ನಾಮಫಲಕ ಅಳವಡಿಕೆಗೆ ಸೀಮಿತಗೊಂಡಿವೆ.
ಯಾವುದೇ ಇಲಾಖೆಗಳಿಗೂ ಈವರೆಗೆ ತಾಲೂಕು ಮಟ್ಟದ ಅಧಿಕಾರಿ ಸೇರಿದಂತೆ ಯಾವೊಬ್ಬ ಸಿಬ್ಬಂದಿ ನಿಯೋಜನೆಯಾಗದೆ ಹುಮನಾಬಾದ ತಾಲೂಕಿನ ಅಧಿಕಾರಿಗಳಿಗೇ ಪ್ರಭಾರ ವಹಿಸಿಕೊಡಲಾಗಿದೆ. ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ.
ಆ ಪೈಕಿ ಸರ್ಕಾದ ಆದೇಶದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್ ಕಚೇರಿಯಲ್ಲಿ ವೃದ್ಧಾಪ್ಯ, ಅಂಗವಿಕಲ, ವಿಧವಾ ಮಾಸಾಶನ ಮತ್ತು ಅದಾಯ, ಜಾತಿ ಪ್ರಮಾಣಪತ್ರ ಮಾತ್ರ ನೀಡಲಾಗುತ್ತಿದೆ.
ಅಧಿಕಾರಿಗಳು ಹೇಳುವ ಪ್ರಕಾರ ತಹಶೀಲ್ದಾರ್ ಮತ್ತು ತಾಲೂಕು ಪಂಚಾಯಿತಿಗಳ ಕನಿಷ್ಟ ಮೂಲ ಸೌಲಭ್ಯಕ್ಕಾಗಿ ಸರ್ಕಾರ 10 ಲಕ್ಷ ಮಾತ್ರ ಅನುದಾನ ಬಿಡುಗಡೆ ಮಾಡಿದೆ.
ಹೋರಾಟ ಹಿನ್ನೆಲೆ ಏನು?: 1978ರಲ್ಲಿ ಹಿರಿಯ ಜೀವಿ ವೀರೇಶ ಹಲವಾಯಿ ನೇತೃತ್ವದಲ್ಲಿ ಆರಂಭಗೊಂಡ ತಾಲೂಕು ಹೋರಾಟ ಸಮಿತಿಯಲ್ಲಿ ಅಶೋಕ ಗುತ್ತೆದಾರ, ದಿಲೀಪಕುಮಾರ ಬಗ್ದಲ್, ಶಾನುಲ್ಲಾ ಬಾಬಾ ಬುಖಾರಿ, ರಾಯಬಸಂವತರಾಯ್ ದೇಶಮುಖ, ಮಹ್ಮದ್ ಹುಸೇನ್, ಮಕ್ಬುಲಮಿಯ್ಯ, ಶಿವರಾಜ ಹುಲಿ, ಬಸವರಾಜ ಬೆಳಕೇರಿ, ಮಲ್ಲಯ್ಯ ಮಠ, ಪುಟ್ಟರಾಜ ನಿರ್ಣಾಕರ, ರೇವಣಪ್ಪ ಹೂಗಾರ, ಸೂರ್ಯಕಾಂತ ಮಠಪತಿ, ಮಲ್ಲಿಕಾರ್ಜುನ ಪಾಟೀಲ, ಮನೋಹರರಾವ್ ಸಿರಮುಂಡಿ, ವಿಶ್ವನಾಥ ಬಾವಗಿ, ವಿಜಯಕುಮಾರ ಬಮ್ಮಣ್ಣಿ ಸೇರಿದಂತೆ ಅನೇಕರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.