ಬರ್ತಿನಂದಿದ್ದ ರುದ್ರಗೌಡ ಇನ್ನೂ ಬರಲಿಲ್ಲ!
ಉಲ್ಟಾ ಹೊಡೆದ ರುದ್ರಗೌಡ ವಾಪಸಾತಿ ಪ್ಲ್ಯಾನ್ | ಬೇಲ್ ಮೇಲೆ ಹೊರಗ್ ಬರ್ತಿನಿ ಎಂದಿದ್ದ ಗೌಡ
Team Udayavani, May 16, 2022, 10:02 AM IST
ಕಲಬುರಗಿ: “ಬರ್ತಿನಂದಿದ್ದನಲ್ಲ ನಮ್ಮ ರುದ್ರಗೌಡ ಇನ್ನೂ ಬರಲಿಲ್ಲ.’ ಇಂತಹದೊಂದು ತಹತಹ, ಶತಪಥ ಬೇಗುದಿ ಜಿಲ್ಲೆಯ ಅಫಜಲಪುರ ತಾಲೂಕಿನ ಜನರ ಹೊಟ್ಟೆಯಲ್ಲಿ ತೊಳಲಾಗುತ್ತಿದೆ. ಅಷ್ಟರ ಮಟ್ಟಿಗೆ ರುದ್ರಗೌಡ ಅಲಿಯಾಸ್ ಆರ್ಡಿಪಿ ಜನಮಾನಸದಲ್ಲಿ ಹಾಸುಹೊಕ್ಕಿರುವ ವ್ಯಕ್ತಿ. ಕಲಬುರಗಿ, ವಿಜಯಪುರ ಎರಡು ಜಿಲ್ಲೆಗಳು ಮಾತ್ರವಲ್ಲದೇ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ರಾಜಧಾನಿಯಲ್ಲಿ ಫೇಮಸ್ಸು.
ಈ ವ್ಯಕ್ತಿ ಫೇಮಸ್ಸಾಗಿದ್ದೇ ಪಿಎಸ್ಐ ಪರೀಕ್ಷೆಯಲ್ಲಿ ಸಿಕ್ಕಾಪಟ್ಟೆ ನೇಮಕಾತಿಗಳಾಗುವಲ್ಲಿ ಅಕ್ರಮ ನಡೆಸಿದ್ದರಿಂದ ಎಂದು ಬೇರೆ ಹೇಳಬೇಕಿಲ್ಲ. ಆದರೆ, ಏ.27ರಂದು ಸಿಐಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುತ್ತಿದ್ದಂತೆ ಇಡೀ ಕಲಬುರಗಿ ಮತ್ತು ಬೆಂಗಳೂರು ನಡುಗಿತ್ತು. ಅಭ್ಯರ್ಥಿಗಳು, ಅವರ ಪಾಲಕರು ತಮ್ಮ ಹಣ ಹೋಯಿತು ಎಂದು ನಡುಗಿದರೆ, ಕೆಲವು ಅಧಿಕಾರಿಗಳು, ರಾಜಕಾರಣಿಗಳು ನಮ್ಮ ಹೆಸರೆಲ್ಲಿ ಹೊರ ಬರುತ್ತದೆಯೋ ಎಂದು ನಡುಗಿದ್ದರು. ಇದರಲ್ಲಿ ಪತ್ರಕರ್ತರೂ ಇರುವುದು ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ.
ಇದೆಲ್ಲದರ ಮಧ್ಯೆ ಖುದ್ದು ರುದ್ರಗೌಡ ಪಾಟೀಲ (ಆರ್ಡಿಪಿ) ಸಿಐಡಿ ಬೋನು ಸೇರುವ ಮುನ್ನ ತವರೂರು ಕಲಬುರಗಿ, ಅಫಜಲಪುರ ಜನರಿಗೆ “ಬೇಲ್ ತಗೊಂಡು ಹೊರಬರ್ತಿನಿ. ಅದಕ್ಕೆಲ್ಲ ಪ್ಲ್ಯಾನ್ ಮಾಡೀನಿ ಚಿಂತೆ ಬೇಡ’ ಎಂದು ಹೇಳಿದ್ದರು. ಆದರೆ, ಈಗ ಅದೆಲ್ಲವೂ ಉಲ್ಟಾ ಹೊಡೆದಿದೆ. 18 ದಿನಗಳಾಗಿವೆ. ಕಲಬುರಗಿ ಸಿಐಡಿ ಅಧಿಕಾರಿಗಳಿಂದ ಬಚಾವಾದ ಗೌಡ ಅಂತಾ ನಿಟ್ಟುಸಿರು ಬಿಡುವಾಗಲೇ, ಬೆಂಗಳೂರಿನ ಅಧಿಕಾರಿಗಳು ಕರೆದೊಯ್ದಿದ್ದಾರೆ. ಇದು ಜನರಲ್ಲಿ ಇನ್ನಷ್ಟು ಗಾಬರಿ ಹುಟ್ಟಿಸಿದೆ. ಬೋನು ಸೇರುವ ಮುನ್ನ ಸಿಐಡಿ ಕಚೇರಿ ಎದುರು ಸುದ್ದಿಗಾಗಿ ನಿಂತಿದ್ದ ಮಾಧ್ಯಮ ಪ್ರತಿನಿಧಿಗಳತ್ತ ಕೈ ಮಾಡಿ “ನಾನೂ ಒಳ್ಳೆಯದು ಮಾಡೀನಿ. ಅದನ್ನು ಬರೀರಿ.. ತೋರಸ್ರಿ.. ಕೆಟ್ಟದ್ದು ಎಷ್ಟಂತ ಬರಿತೀರಿ’ ಎಂದಿದ್ದ.
ಹೆಲಿಕ್ಯಾಪ್ಟರ್ನಲ್ಲಿ ಬರ್ತಾನೆ ಗೌಡ!
ಇದು ಅಫಜಲಪುರ ಜನ ಸಾಮೂಹಿಕ ವಿವಾಹ ನಡೆದ ಏ.26ರಂದು ಕಾಯ್ದು ನೋಡಿದ ಕಥೆ. ವಿವಾಹದ ಮುನ್ನಾ ದಿನವೇ ಸಿಐಡಿ ಅಧಿಕಾರಿಗಳು ಸಹೋದರ ಮಹಾಂತೇಶ ಪಾಟೀಲರನ್ನು ಹೊತ್ತು ತಂದಿದ್ದರು. ರುದ್ರಗೌಡರನ್ನು ಬಂಧಿಸುವುದು ಖಾತ್ರಿ ಆಗಿತ್ತು. ಸಾಮೂಹಿಕ ವಿವಾಹ ಸಮಾರಂಭದಲ್ಲಿ ರುದ್ರಗೌಡ ಭಾಗಿ ಆಗೇ ಆಗುತ್ತಾನೆ. ಆತ ಮಾತು ಕೊಟ್ಟರೆ ಖಂಡಿತ ಬರುತ್ತಾನೆ ಎಂದು ಎಷ್ಟೋ ವಧು-ವರರ ಹೆತ್ತವರು ದೊಡ್ಡ ಕಾರುಗಳಿಗಾಗಿ ರಸ್ತೆಗಳ ಕಡೆ, ಹೆಲಿಕ್ಯಾಪ್ಟರ್ಗೆ ಆಕಾಶದ ಕಡೆ ನೋಡುತ್ತಲೇ ನಿರಾಸೆಯಿಂದ ಮಕ್ಕಳ ತಲೆ ಮೇಲೆ ಅಕ್ಷತೆ ಹಾಕಿದ್ದರು. ಬಹಳಷ್ಟು ಜನರಿಗೆ ಅಂದಿನ ಮದುವೆ ಊಟ ರುಚಿ ಹತ್ತಿರಲಿಲ್ಲ. ಆವತ್ತು ಇಡೀ ಸಮಾಜದ ಮುಖಂಡರು, ಹಿರಿಯರು ಸಾಮೂಹಿಕ ವಿವಾಹವನ್ನು ಟೊಂಕ ಕಟ್ಟಿ ನಿಂತು ನಡೆಸಿಕೊಟ್ಟಿದ್ದರು.
ಸರ್ಕಾರಿ ನೌಕರಿ ಕೊಡಿಸೋ “ದೇವರು‘
ಅಫಜಲಪುರದ ಹಲವು ಗ್ರಾಮಗಳಲ್ಲಂತೂ ಸರ್ಕಾರಿ ನೌಕರಿ ಕೊಡಿಸೋ ದೇವರೇ ಆಗಿದ್ದ ರುದ್ರಗೌಡ. ಆತ ನಡೆದು ಹೋಗುತ್ತಿದ್ದರೆ ವಯಸ್ಸಾದ ಹೆಣ್ಣುಮಕ್ಕಳು, ಗಂಡಸರು ಕೈ ಮುಗಿದು “ಗೌಡಾ’ ಎನ್ನುತ್ತಲೆ ಕಾಲು ಬೀಳಲು ಬರುತ್ತಿದ್ದರು. ಆದರೆ, ಇವತ್ತು ಏನೆಲ್ಲಾ ಆಗಿ ಹೋಗಿದೆ. ಗೌಡ ಜೈಲು ಸೇರಿದ್ದಾನೆ. ಅಧಿಕಾರಿಗಳು ಅವನನ್ನು ಬಿಡುತ್ತಿಲ್ಲ. ಇದೆಲ್ಲವೂ ಭಗವಂತನೇ ತಂದ ಆಪತ್ತು. ನೌಕರಿ ಕೊಡಿಸಿದ್ದ ಪಾಲಕರ ಪ್ರಾರ್ಥನೆಯಾದರೂ ಅವನಿಗೆ ತಟ್ಟಿ ಬಿಡುಗಡೆ ಆಗಬಾರದೇ ಎನ್ನುತ್ತಾರೆ ಜನರು. ಈ ಮಧ್ಯೆ ಸಿಐಡಿ ಅಧಿಕಾರಿಗಳ ಹೆದರಿಕೆಗೆ ಆತನ ಬೆಂಬಲಿಗರೂ ಊರು ಬಿಟ್ಟಿದ್ದಾರೆ.
ಇದು ರಾಜಕೀಯ ತಂತ್ರ!
ಪಿಎಸ್ಐ ಅಕ್ರಮದಲ್ಲಿ ಉದ್ದೇಶ ಪೂರ್ವಕವಾಗಿ ಅಫಜಲಪುರದ ರಾಜಕಾರಣದ ಹುರಿಯಾಳುಗಳನ್ನು ತಂತ್ರ ಮಾಡಿ ಸಿಕ್ಕಿಸಿ ಹಾಕಿಸಿದ್ದಾರೆ ಎನ್ನುತ್ತಾರೆ ಆರ್ಡಿಪಿ ಬೆಂಬಲಿಗರು. ಬಿಜೆಪಿ ಬಂಡವಾಳ ಹೊರಬರುತ್ತದೆ ಎಂದು ಕೆಲವರು ಗೌಡನ ಹೆಸರು ಮುನ್ನೆಲೆಗೆ ತಂದು ತಾವು ಬಚಾವ್ ಆಗಲು ನೋಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ತಪ್ಪು ಮಾಡಿದವ ಉಪ್ಪು ತಿನ್ನುತ್ತಿದ್ದಾನೆ. ಇದರಲ್ಲಿ ತಂತ್ರವೇನಿದೆ? ಎನ್ನುವ ಮಾತುಗಳು ಕೇಳಿ ಬರುತ್ತಿವೆ. ವಾಸ್ತವದಲ್ಲಿ ಈಗಲೂ ಜನ ರುದ್ರಗೌಡ ಖುಲಾಸೆಯಾಗಿ ಹೊರ ಬರ್ತಾನೆ. ನಮ್ಮ ರೊಕ್ಕ ಕೊಡ್ತಾನೆ. ಅಫಜಲಪುರದ ರಾಜಕಾರಣದಲ್ಲಿ ಭರ್ಜರಿ ಎಂಟ್ರಿ ನೀಡಿ ಎದುರಾಳಿಗಳನ್ನು ಬಗ್ಗು ಬಡಿತಾನೆ ಎನ್ನುವ ಉಮೇದು ಮಾತ್ರ ಸತ್ತಿಲ್ಲ.
–ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್
Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ