ಸಂಸತ್ ನಲ್ಲಿ ಅಚ್ಚ ಕನ್ನಡದಲ್ಲಿ ಭಾಷಣ ಮಾಡಿ ಗಮನಸೆಳೆದ ಕೋಲಾರದ ವಿದ್ಯಾರ್ಥಿನಿ
ಯುವ ಪ್ರತಿನಿಧಿಗಳ ಸಮ್ಮುಖದಲ್ಲಿ ತಮ್ಮ ವಿಚಾರ, ನಿಲುವುಗಳನ್ನು ಭಾಷಣದ ಮೂಲಕ ಪ್ರಸ್ತುತ ಪಡಿಸಿದ್ದಾರೆ.
Team Udayavani, Dec 2, 2022, 11:17 AM IST
ಕೋಲಾರ: ಕೋಲಾರದ ಕುಮಾರಿ ಸ್ಪೂರ್ತಿ ಸಂಸತ್ತಿನಲ್ಲಿ ಅಚ್ಚ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಸ್ಫೂರ್ತಿ ಪ್ರಸ್ತುತ ಬೆಂಗಳೂರಿನ ಬಿಎಂಎಸ್ ಕಾನೂನು ಮಹಾವಿದ್ಯಾಲಯದ ಪ್ರಥಮ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಭಾರತ ಸರ್ಕಾರದ ಶಿಕ್ಷಣ, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವಾಲಯ, ಪ್ರಜಾಪ್ರಭುತ್ವಕ್ಕಾಗಿ ಸಂಸದೀಯ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ನ.19ರಂದು ಜಂಟಿಯಾಗಿ ಆಯೋಜಿ ಸಿದ್ದ “ರಾಷ್ಟ್ರನಾಯಕರಿಗೆ ಸಂಸತ್ನಲ್ಲಿ ಗೌರವ ಸಮರ್ಪಣೆ’ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯವನ್ನು ಕೋಲಾರದ ಚಿನ್ನದ ಪದಕ ವಿಜೇತ ಹುಡುಗಿ ಕು.ಸ್ಪೂರ್ತಿ ಪ್ರತಿನಿಧಿಸಿದ್ದರು.
ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಣ್ಯ-ಮಾನ್ಯರು, ಸಂಸತ್ ಸದಸ್ಯರು ಇತರೆ ರಾಜ್ಯಗಳ ಯುವ ಪ್ರತಿನಿಧಿಗಳ ಸಮ್ಮುಖದಲ್ಲಿ ತಮ್ಮ ವಿಚಾರ, ನಿಲುವುಗಳನ್ನು ಭಾಷಣದ ಮೂಲಕ ಪ್ರಸ್ತುತ ಪಡಿಸಿದ್ದಾರೆ.
ಅಚ್ಚ ಕನ್ನಡದಲ್ಲಿ ತಮ್ಮ ಭಾಷಣವನ್ನು ಪ್ರಾರಂಭಿಸಿ, ಕನ್ನಡದ ನುಡಿಗಟ್ಟುಗಳು, ಸಂಸ್ಕೃತದ ಉಕ್ತಿಗಳ ಮೂಲಕ ಮಹಿಳಾ ಸಬಲೀಕರಣ, ಯುವ ಸಬಲೀಕರಣ ದಂತಹ ಹಲವು ಸಮಕಾಲೀನ ವಿಚಾರಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತುತ ಪಡಿಸಿ ಪಾರ್ಲಿಮೆಂಟ್ನ ಸೆಂಟ್ರಲ್ ಹಾಲ್ನಲ್ಲಿ ನೆರೆದಿದ್ದ ಎಲ್ಲರ ಮೆಚ್ಚುಗೆ ಗಳಿಸಿದರು.