ಕೋಲಾರ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ
Team Udayavani, Dec 5, 2022, 10:42 PM IST
ಕೋಲಾರ: ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ರಮೇಶ್ಕುಮಾರ್ ಬಣಗಳ ನಡುವಿನ ಭಿನ್ನಮತ ಸ್ಫೋಟಗೊಂಡು ಕೈ ಕೈ ಮಿಲಾಯಿಸುವ ಹಂತ ತಲುಪಿದೆ.
ಸೋಮವಾರ ಜರಗಿದ ಜಿಲ್ಲಾ ಸಮಾವೇಶ ನಡೆಸುವ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಮುನಿಯಪ್ಪ ಎದುರೇ ಗಲಾಟೆ ಆರಂಭಗೊಂಡಿತು. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಸ್ತಾವಕೇಳಿ ಬರುತ್ತಿದ್ದಂತೆ ಕಾರ್ಯಕರ್ತರ ಕೂಗಾಟ, ಪರಸ್ಪರ ಘರ್ಷಣೆಯ ಹಂತ ತಲುಪಿತು.
ಮತ್ತೊಂದು ಗುಂಪು ಕೆ.ಎಚ್. ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಘೋಷಣೆ ಕೂಗಿ, ನಿಮ್ಮಿಬ್ಬರ ಜಗಳದಿಂದ ಕೋಲಾರಕ್ಕೆ ಸಿದ್ದರಾಮಯ್ಯ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕೂಗಿ, ನಿಮ್ಮ ಬಣ ರಾಜಕೀಯದಿಂದ ಕಾಂಗ್ರೆಸ್ ಜಿಲ್ಲೆಯಲ್ಲಿ ನಾಶವಾಗುತ್ತಿದೆ ಎಂಬ ಆರೋಪಗಳು ಕೇಳು ಬಂದವು. ಕೊನೆಗೆ ಕಾಂಗ್ರೆಸ್ ಕಚೇರಿಯಿಂದ ಹೊರಗೂ ಗಲಾಟೆ ವ್ಯಾಪಿಸಿ, ಘೋಷಣೆ, ಕೂಗಾಟ ಮೊಳಗಿತು.
ರಮೇಶ್ ಬಣಕ್ಕೆ ಮುನಿಯಪ್ಪ ಟಾಂಗ್
ಎರಡು ಬಣಗಳ ನಡುವಿನ ಘರ್ಷಣೆ ಹೆಚ್ಚುತ್ತಿದ್ದಂತೆ ಕೆ.ಎಚ್.ಮುನಿಯಪ್ಪ ಮೈಕ್ ಕಿತ್ತುಕೊಂಡು ಈ ರೀತಿ ಗಲಾಟೆ ಮಾಡುವವರು ಸಿದ್ದರಾಮಯ್ಯರನ್ನು ಕರೆದುಕೊಂಡು ಬಂದು ಗೆಲ್ಲಿಸುತ್ತಾರಾ ಎಂದು ಟಾಂಗ್ ನೀಡಿದರು.