ಕೆಡಿಪಿ ಸಭೆಯನ್ನೇ ನಡೆಸದ ಉಸ್ತುವಾರಿ ಸಚಿವ!
Team Udayavani, May 10, 2022, 6:08 PM IST
ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಈವರೆವಿಗೂ ಒಂದೇ ಒಂದು ಕೆಡಿಪಿ ಸಭೆ ಕರೆದಿಲ್ಲ, ಮೊದಲ ಸಭೆಯನ್ನು ಮೇ.10 (ಮಂಗಳವಾರ) ಕರೆದಿದ್ದು ಬಜೆಟ್ ಘೋಷಣೆಗಳ ಅನುಷ್ಠಾನ ಮತ್ತು ವಿವಿಧ ಅಭಿವೃದ್ಧಿ ವಿಚಾರಗಳ ಪ್ರಗತಿ ಪರಿಶೀಲಿಸಬೇಕಿದೆ.
ಮುಳಬಾಗಿಲು ಶಾಸಕ ಎಚ್.ನಾಗೇಶ್ ಕೋಲಾರ ಜಿಲ್ಲಾ ಹೊಣೆಗಾರಿಕೆ ಹೊತ್ತುಕೊಂಡಿದ್ದ ಸಂದರ್ಭದಲ್ಲಿ 2021ರ ಜನವರಿ 8 ರಂದು ಕೆಡಿಪಿ ಸಭೆ ನಡೆದಿದ್ದು ಬಿಟ್ಟರೆ, ಆನಂತರ ಉಸ್ತುವಾರಿ ಹೊಣೆ ಹೊತ್ತುಕೊಂಡಿದ್ದ ಎಂ.ಟಿ.ಬಿ.ನಾಗರಾಜ್ ಮತ್ತು ಈಗಿನ ಉಸ್ತುವಾರಿ ಸಚಿವ ಮುನಿರತ್ನ ಒಂದೇ ಒಂದು ಕೆಡಿಪಿ ಸಭೆಯನ್ನು ಕರೆಯುವ ಗೋಜಿಗೆ ಹೋಗಲಿಲ್ಲ.
ಬಜೆಟ್ನಲ್ಲಿ ಖೋತಾ: ಕೋಲಾರ ಜಿಲ್ಲೆಗೆ ಬಜೆಟ್ನ ನಿರೀಕ್ಷೆಗಳು ಸಾಕಷ್ಟು ಇದ್ದವು. ಉಸ್ತುವಾರಿ ಸಚಿವರಾಗಿದ್ದ ಮುನಿರತ್ನರಿಗೆ ವಿವಿಧ ಸಂಘಟನೆಗಳು ಬಜೆಟ್ ಬೇಡಿಕೆಗಳ ಕುರಿತಂತೆ ಹಲವು ಮನವಿಗಳನ್ನು ನೀಡಿದ್ದರು ಸ್ವತಹ ಸಚಿವ ಮುನಿರತ್ನ ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಘಟಕ ಬಜೆಟ್ನಲ್ಲಿ ಘೋಷಿಸುವ ಭರವಸೆ ನೀಡಿದ್ದರು. ಆದರೆ, ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿದ ಬಜೆಟ್ನಲ್ಲಿ ಕೋಲಾರಕ್ಕೆ ಸಿಕ್ಕಿದ್ದು ಶೂನ್ಯ.
ಬಜೆಟ್ನಲ್ಲಿ ಜಿಲ್ಲೆಗೆ ಏನೂ ದೊರಯದಿರುವ ಕಾರಣ ಬಜೆಟ್ ಘೋಷಣೆ ಅನುಷ್ಠಾನ ಕುರಿತು ಸಭೆ ನಡೆಸುವುದು ವ್ಯರ್ಥ ಎಂದು ಭಾವಿಸಿರುವ ಉಸ್ತುವಾರಿ ಸಚಿವರು ಕೆಡಿಪಿ ಸಭೆಯನ್ನು ಕರೆಯುವ ಗೋಜಿಗೂ ಹೋಗಲಿಲ್ಲ. ಮೇ.7 ಶನಿವಾರ ಕೋಲಾರ ಜಿಲ್ಲಾ ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆಯನ್ನು ಕರೆಯಲಾಗಿತ್ತು. ಆದರೆ, ಮಾಜಿ ಸಚಿವ ವರ್ತೂರು ಪ್ರಕಾಶ್ ಮತ್ತು ಮಾಲೂರು ಮಾಜಿ ಶಾಸಕ ಮಂಜುನಾಥಗೌಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ವಿಚಾರಕ್ಕೆ ಸಚಿವರು ಗಮನಹರಿಸಿ ಕೆಡಿಪಿ ಸಭೆಯನ್ನು ಅಂತಿಮ ಘಳಿಗೆಯಲ್ಲಿ ರದ್ದುಗೊಳಿಸಿದರು.
ಜಿಪಂ ಆಡಳಿತ ಮಂಡಳಿ ರದ್ದುಗೊಂಡು ಈಗಾಗಲೇ ವರ್ಷ ಕಳೆಯುತ್ತಿದೆ. ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಜರುಗಿ, ಶಾಶ್ವತ ನದಿ ನಾಲೆಗಳಿಲ್ಲದ ಜಿಲ್ಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು, ಲಭ್ಯವಿರುವ ಕೊಳವೆಬಾವಿ, ನೀರಿನ ಸಂಪನ್ಮೂಲ, ಟ್ಯಾಂಕರ್ ಮೂಲಕ ನೀರು ಪೂರೈಕೆ ಇತ್ಯಾದಿ ವಿಚಾರಗಳ ಚರ್ಚೆ ನಡೆಯುತ್ತಿತ್ತು. ಅಗತ್ಯ ಅನುದಾನಕ್ಕೆ ಬೇಡಿಕೆ ಈಡಲಾಗುತ್ತಿತ್ತು. ಆದರೆ, ಈ ಬಾರಿ ಇಂತ ಯಾವುದೇ ಪ್ರಯತ್ನ ನಡೆದೇ ಇಲ್ಲ.
ಸಚಿವರಿಗೆ ಪುರುಸೊತ್ತಿಲ್ಲ: ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿದ್ದರೂ ಸಚಿವ ಮುನಿರತ್ನ ಕೋಲಾರ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದಾಗ ಮತ್ತು ಬಿಜೆಪಿಯ ಕಾರ್ಯಕ್ರಮ, ಸರಕಾರದ ಒಂದೆರೆಡ ಕಾರ್ಯಕ್ರಮಗಳಿಗೆ ಬಂದು ಹೋಗಿದ್ದು ಬಿಟ್ಟರೆ ಅಭಿವೃದ್ಧಿ ವಿಚಾರದಲ್ಲಿ ಚರ್ಚಿಸಲು ಉಸ್ತುವಾರಿ ಸಚಿವರಿಗೆ ಇದುವರೆವಿಗೂ ಪುರುಸೊತ್ತಾಗಿರಲಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರ್ಯಾರು ಆಯ್ಕೆಯಾಗಿಲ್ಲದ ಕಾರಣ ಹಾಲಿ ಇರುವ ಶಾಸಕರ್ಯಾರು ಉಸ್ತುವಾರಿ ಸಚಿವರು ಬರಬೇಕೆಂದು ಬಯಸುತ್ತಿಲ್ಲ. ರೋಗಿ ಕೇಳಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎನ್ನುವಂತಾಗಿದೆ.
ಚರ್ಚೆಯೇ ಇಲ್ಲ: ಕೋಲಾರ ಜಿಲ್ಲಾ ಕೇಂದ್ರದಿಂದ ಕೇವಲ 70 ಕಿ.ಮೀ ದೂರದಲ್ಲಿರುವ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಬಜೆಟ್ ಅನುಷ್ಠಾನ ಕುರಿತಂತೆ ಸರಣಿ ಸಭೆಗಳನ್ನು ವಿವಿಧ ಇಲಾಖಾವಾರು ನಡೆಸುತ್ತಿದ್ದರೆ, ಕೋಲಾರ ಜಿಲ್ಲೆಯಲ್ಲಿ ಬಜೆಟ್ ಅನುಷ್ಠಾನ ಕುರಿತಂತೆ ಚರ್ಚಿಸುವವರೇ ಇಲ್ಲವಾಗಿದ್ದಾರೆ. ಅಂತೂ ಇಂತೂ ಅತ್ತೂ ಕರೆದು ಔತಣ ಮಾಡಿಸಿಕೊಂಡರು ಎಂಬಂತೆ ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬಂದ ಮೇಲೆ ಮೇ.10ರಂದು ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆಯನ್ನು ಕರೆಯಲಾಗಿದೆ. ಈ ಸಭೆ ಕಾಟಾಚಾರದ ಸಭೆಯಾಗದೆ ಕನಿಷ್ಠ ಕೋಲಾರ ಜಿಲ್ಲೆಯ ಅಭಿವೃದ್ಧಿಪರವಾದ ಚರ್ಚೆಗೆ ಸೀಮಿತವಾಗಲಿ ಎಂದು ಜಿಲ್ಲೆಯ ಜನರು ಬಯಸುತ್ತಿದ್ದಾರೆ.
ಸಚಿವರು ನಾಪತ್ತೆ ಹುಡುಕಿಕೊಡಿ : ಉಸ್ತುವಾರಿ ಸಚಿವರ ಈ ನಿರ್ಲಕ್ಷ್ಯ ಕುರಿತಂತೆ ಜಿಲ್ಲೆಯಲ್ಲಿ ಈಗಾಗಲೇ ಜನಸಾಮಾನ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಲಯದಲ್ಲಿ ಆಕ್ರೋಶ ನ್ಪೋಟಗೊಂಡಿದೆ. ರೈತ ಸಂಘಟನೆಗಳು ಹಲವಾರು ಬಾರಿ ಸಚಿವರು ಕಳೆದು ಹೋಗಿದ್ದಾರೆ ಹುಡುಕಿ ಕೊಡಿ ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡುವ ಪ್ರತಿಭಟನೆ ನಡೆಸಿದ್ದರು. ಕೆಲ ಘಟನೆಗಳಿಗೆ ಸ್ಪಂದಿಸಿಲ್ಲವೆಂದು ಪ್ರತಿಕೃತಿ ದಹನವೂ ನಡೆದಿದೆ. ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಸುದ್ದಿಗೋಷ್ಠಿಯನ್ನೇ ಮಾಡಿ ಒಂದೂವರೆ ವರ್ಷದಿಂದ ಕೆಡಿಪಿ ಸಭೆ ಕರೆಯದಿರುವ ಕುರಿತು ಸಚಿವರನ್ನು ಟೀಕಿಸಿದ್ದರು. ಆದರೂ, ಸಚಿವ ಮುನಿರತ್ನರಿಂದ ಪ್ರತ್ಯುತ್ತರವೇ ಇಲ್ಲ.
ಧ್ವಜ ಹಾರಿಸುವ ಸಚಿವ : ಜನವರಿ ನಂತರ ಕೋಲಾರ ಜಿಲ್ಲೆಯಲ್ಲಿ ಒಂದೆರೆಡು ಬಾರಿ ಅಕಾಲಿಕ ಮಳೆ ಸುರಿದು ತೋಟಗಾರಿಕೆ ಬೆಳೆಗಳಿಗೆ ಸಾಕಷ್ಟು ನಷ್ಟ ಸಂಭವಿಸಿತ್ತು. ಆಗಲೂ ಸಚಿವರು ಕೋಲಾರದತ್ತ ಗಮನಹರಿಸಲಿಲ್ಲ. ಕೋಲಾರ ಜಿಲ್ಲೆಗೆ ತಮ್ಮ ಉಸ್ತುವಾರಿ ಇದೆ ಎನ್ನುವುದನ್ನು ನೆನಪಿಸಿಕೊಳ್ಳಲಿಲ್ಲ. ತಾವೇನಿದ್ದರೂ ಆ. 15ರ ಸ್ವಾತಂತ್ರ್ಯೋತ್ಸವ ಮತ್ತು ಜ. 26 ರ ಗಣರಾಜ್ಯೋತ್ಸವಗಳಿಗೆ ಬಂದು ತ್ರಿವರ್ಣ ಧ್ವಜ ಹಾರಿಸಿ, ಅಧಿಕಾರಿಗಳು ಸಿದ್ಧಪಡಿಸಿದ ಭಾಷಣ ಓದಿ ಹೇಳುವುದಷ್ಟೇ ಕರ್ತವ್ಯ ಎಂದು ಭಾವಿಸಿದಂತಿದೆ.
-ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು