Land: ಪರರ ಪಾಲಾಗಿರುವ ಪೊಲೀಸ್ ಠಾಣೆ ಜಮೀನು
Team Udayavani, Sep 14, 2023, 1:32 PM IST
ಮುಳಬಾಗಿಲು: ಏನೇ ಕಳುವಾದರೂ ಹುಡುಕಿ ಕೊಡುವ ಪೊಲೀಸರಿಗೆ, ಹಲವು ದಶಕಗಳಿಂದ ತನ್ನದೇ ಜಮೀನು ಕಳುವಾಗಿದ್ದರೂ ಪೊಲೀಸ್ ಅಧಿಕಾರಿಗಳ ಕಾರ್ಯ ವೈಖರಿಯಿಂದ ಕಾಣದ ರಾಜಕಾರಣಿಗಳಿಗೆ ಸೆಡ್ಡು ಹೊಡೆದು ಅದನ್ನು ದಕ್ಕಿಸಿಕೊಳ್ಳಲು ಆಗದೇ ಪರರ ವಶದಲ್ಲಿಯೇ ಬಿಟ್ಟಿ ರುವುದರಿಂದ ತಾಯಲೂರು ಪೊಲೀಸ್ ಹೊರ ಠಾಣೆ ಜಮೀನು ದಕ್ಕಿಸಿ ಕೊಳ್ಳಲು ಗೃಹ ಸಚಿವರೇ ಗಮನಹರಿಸಬೇಕೆಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಮುಳಬಾಗಿಲು ತಾಲೂಕಿನ ಅತ್ಯಂತ ಸೂಕ್ಷ್ಮ ಪ್ರದೇಶವೆಂದೇ ಹೆಸರಾಗಿದ್ದ ತಾಯಲೂರು ಹೋಬಳಿಯ 73 ಹಳ್ಳಿಗಳಲ್ಲಿ ಸಾವಿರಾರು ಜನರು ವಾಸ ವಾಗಿದ್ದು, ಸುಮಾರು 1865ರಲ್ಲಿ ಆಂಗ್ಲರು ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡಲೆಂದು ತಾಯಲೂರಲ್ಲಿ ಪೊಲೀಸ್ ಹೊರ ಠಾಣೆ ಮಂಜೂರು ಮಾಡಿ ಠಾಣೆಗೆ ಅಗತ್ಯವುಳ್ಳ ಕಟ್ಟಡ ನಿರ್ಮಾಣಕ್ಕಾಗಿ ಸ.ನಂ.35ರಲ್ಲಿ 4.1ಎಕರೆ ಜಮೀನು ಮತ್ತು ಎಎಸ್ಐ, 1 ಎಚ್.ಸಿ, 2 ಪಿ.ಸಿ.ಹುದ್ದೆಗಳನ್ನು ಮಂಜೂರು ಮಾಡಿರುತ್ತಾರೆ.
ಹಾಳು ಕೊಂಪೆಯಾದ ಠಾಣೆಯ ಕಟ್ಟಡ: ಅದರಂತೆ ಪೊಲೀಸ್ ಇಲಾಖೆ ಹೊರ ಠಾಣೆ ಕಟ್ಟಡ ಮತ್ತು 4 ವಸತಿ ಗೃಹ ಗಳನ್ನು ನಿರ್ಮಿಸಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಕಾನೂನು ಪಾಲಿಸುತ್ತಾ ಬಂದಿರುತ್ತಾರೆ. ಆದರೆ, ಕ್ರಮೇಣ ಠಾಣೆಯ ಕಟ್ಟಡ ಮತ್ತು ವಸತಿ ಗೃಹಗಳು ಶಿಥಿಲಗೊಂಡು ಹಾಳು ಬಿದ್ದಿರು ವುದರಿಂದ ಸಿಬ್ಬಂದಿಯು ವಸತಿ ಗೃಹಗಳಿಂದ ದೂರ ಉಳಿದಿರುತ್ತಾರೆ, ಹಾಳು ಕೊಂಪೆಯಂತಾಗಿದ್ದ ಠಾಣೆಯ ಕಟ್ಟಡವನ್ನು ಪೊಲೀಸ್ ಇಲಾಖೆ 17 ವರ್ಷಗಳ ಹಿಂದೆ ನವೀಕರಣ ಮಾಡಿ ಸುಮ್ಮನಾಗಿದ್ದರಿಂದ ವಸತಿ ಗೃಹಗಳಲ್ಲಿ ಗಿಡ ಗಂಟೆಗಳು ಬೆಳೆದು ಯಾರೂ ಹೋಗುವಂತಿಲ್ಲದಷ್ಟು ಹಾಳು ಬಿದ್ದಿರುತ್ತದೆ.
ಠಾಣೆಗೆ ಮಂಜೂರಾಗಿರುವ 4.01ಎಕರೆ ಜಮೀನು ಪೈಕಿ ಉಳಿದಿರುವ ಅರ್ಧ ಎಕರೆ ಜಮೀನಿನಲ್ಲಿ ಠಾಣೆ ಕಟ್ಟಡ ಮತ್ತು ಹಾಳು ಬಿದ್ದ ವಸತಿ ಗೃಹಗಳಿದ್ದು, ಉಳಿದ ಸುಮಾರು ಮೂರುವರೆ ಎಕರೆ ಜಮೀನನ್ನು ರಾಜಕಾರ ಣಿಗಳ ಕೃಪೆ ಯಿಂದ ತಾಯಲೂರು ಗ್ರಾಮ ಪಂಚಾಯಿ ತಿಯು ಹಲವಾರು ವರ್ಷಗಳ ಹಿಂದೆಯೇ ಅತಿಕ್ರಮಿಸಿಕೊಂಡು 28 ಅಂಗಡಿಗಳನ್ನು ಕಟ್ಟಿ ಬಾಡಿಗೆಗೆ ನೀಡಿ ವಾರ್ಷಿಕ ಲಕ್ಷಾಂತರ ರೂ.ಗಳ ವರಮಾನ ಪಡೆದುಕೊಳ್ಳು ತ್ತಿದ್ದಾರೆ, ಅದನ್ನು ಕಂಡ ಮತ್ತಷ್ಟು ಮುಖಂಡರು ವಿಎಸ್ ಎಸ್ಎನ್ ಕಟ್ಟಡ ನಿರ್ಮಾಣ ಮಾಡಿಕೊಂಡರೆ, ಕೆಲವು ಸರ್ಕಾರಿ ಇಲಾಖೆಯು ವಸತಿ ಗೃಹಗಳು, ಸಮುದಾಯ ಭವನ ಹಾಗೂ ಪಶು ವೈದ್ಯಕೀಯ ಇಲಾಖೆಯ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಿಕೊಂಡಿದ್ದಾರೆ.
ಇನ್ನು 1990ರಲ್ಲಿ ಜಲಸಂಪನ್ಮೂಲ ಇಲಾಖೆಯು ಮಳೆ ಮಾಪನಾ ಕೇಂದ್ರವನ್ನು ಠಾಣಾ ಸ್ಥಳದಲ್ಲಿಯೇ ನಿರ್ಮಾಣ ಮಾಡಿಕೊಂಡು ಠಾಣೆಯ ಆವರಣ ದಲ್ಲಿಯೇ ನಾಮಫಲಕ ಹಾಕಿಕೊಂಡು ತಮ್ಮ ಹಕ್ಕನ್ನು ಪ್ರತಿಪಾದಿಸಿಕೊಂಡಿದ್ದಾರೆ, ಇನ್ನು ಮುಂಭಾಗದಲ್ಲಿ ಉಳಿದಿರುವ ಸ್ಥಳದಲ್ಲಿ ಕೆಲವು ವರ್ಷಗಳ ಹಿಂದೆಯೇ ರಾಜಾಕಾರಣಿಗಳ ಕೃಪೆಯಿಂದ ಗ್ರಾಮಸ್ಥರು ಬಸ್ ಶೆಲ್ಟರ್ ನಿರ್ಮಿಸಿದಾಗಲೂ ಪೊಲೀಸ್ ಅಧಿಕಾರಿಗಳ್ಯಾರು ಬಾಯಿ ಬಿಡದ ಕಾರಣ ಪೊಲೀಸ್ ಠಾಣೆಯ ಜಮೀನು ಆ ಭಾಗದ ಪ್ರತಿಯೊಬ್ಬ ಮುಖಂಡರ ಸ್ವಂತ ಸ್ವತ್ತು ಎಂಬ ಭಾವನೆ ಮನದಲ್ಲಿದೆ.
ಕಂದಾಯ ಇಲಾಖೆಗೆ ಪತ್ರ: ಆದರೆ, ಪ್ರತಿ 2 ವರ್ಷಗಳಿಗೊಮ್ಮೆ ವರ್ಗಾವಣೆಯಾಗಿ ಮುಳಬಾಗಿಲು ಠಾಣೆಗೆ ಬರುವ ಪಿಎಸ್ಐಗಳು ಠಾಣೆಯ ಜಮೀ ನನ್ನು ಸರ್ವೆ ಮಾಡಿಸಿ ಹದ್ದು ಬಸ್ತು ಮಾಡಿ ಕೊಡಲು ಹಲವಾರು ವರ್ಷಗಳಿಂದಲೂ ತಾಪಂ ಇಒ ಮತ್ತು ತಹಶೀಲ್ದಾರ್ಗಳಿಗೆ ಪತ್ರ ವ್ಯವಹಾರ ನಡೆಸಿದ್ದಾರೆ, ಅಂತೆಯೇ 2014ರಲ್ಲಿ ಅಂದಿನ ಪಿಎಸ್ಐ ಎಂ. ಶಂಕರಪ್ಪ ಸಹ ಹೊರ ಠಾಣೆ ಜಮೀನು ಸರ್ವೆ ಮಾಡಲು ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು.
ಕುಡಿಯುವ ನೀರಿನ ಘಟಕ ನಿರ್ಮಾಣ: ಅಲ್ಲಿಗೂ ಸುಮ್ಮನಾಗದ ಅಲ್ಲಿನ ಸ್ಥಳೀಯ ಮುಖಂಡರು 2016ರ ಜುಲೈ ತಿಂಗಳಿನಲ್ಲಿ ಠಾಣೆಯ ಮುಂಭಾಗ ದಲ್ಲಿಯೇ ಕುಡಿಯುವ ನೀರಿನ ಘಟಕ ನಿರ್ಮಿಸಲು ಪಾಯ ಹಾಕುತ್ತಿದ್ದಂತೆ ಅಂದಿನ ಸಿಪಿಐ ರಾಮರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ತಡೆದಿದ್ದರು, ಆದರೆ ಮುಖಂ ಡರು ಸ್ಥಳೀಯ ಪೊಲೀಸ್ ಅಧಿಕಾರಿಗಳ ಮಾತನ್ನು ಲೆಕ್ಕಿಸದೇ ಅದೇ ದಿನ ರಾತ್ರಿಯಲ್ಲಿಯೇ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದರಿಂದ ಮರು ದಿನ ಹೊರ ಠಾಣೆ ಯಲ್ಲಿದ್ದ ಪೊಲೀಸರು ಗ್ರಾಮದ ಜನರೆದುರು ನಗೆಪಾಟಲಿಗೆ ಈಡಾಗಬೇಕಾದ ಸನ್ನಿವೇಶ ಉಂಟಾಗಿತ್ತು.
ಸರ್ವೆ ಮಾಡದ ಅಧಿಕಾರಿಗಳು: ಆ ಸಂದರ್ಭದಲ್ಲಿ ತಾಯಲೂರು ಗ್ರಾಪಂ ಪಿಡಿಒ ಆಗಿದ್ದ ನಾರಾಯಣ ಸ್ವಾಮಿ ಸಹ ಪೊಲೀಸ್ ಠಾಣೆಯ ಜಮೀನು ಸರ್ವೆ ಮಾಡಿಸಿಕೊಳ್ಳಲಿ, ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿದ್ದರೆ ಬಿಟ್ಟು ಕೊಡುವುದಾಗಿ ತಿಳಿಸಿ ದ್ದರು. ಆದರೆ, ಅಧಿಕಾರಿಗಳು ಸರ್ವೆ ಮಾಡದೇ ಕಾರಣ ಪೊಲೀಸರ ಪ್ರಯತ್ನ ವಿಫಲಗೊಂಡಿದ್ದರಿಂದ ಇಂದಿಗೂ ಪೊಲೀಸ್ ಹೊರ ಠಾಣೆ ಜಮೀನು ಪರರ ವಶದಲ್ಲಿದೆ, ಆದರೆ ಕಳೆದ 7-8 ತಿಂಗಳಿಂದ ಸದರೀ ಹೊರ ಠಾಣೆಯಲ್ಲಿ ಪೊಲೀ ಸರು ಕರ್ತವ್ಯ ನಿರ್ವಹಿಸದೇ ಠಾಣೆಗೆ ಬೀಗ ಹಾಕಿರುವುದರಿಂದ ಹಾಳು ಕೊಂಪೆಯಂತಾಗಿದೆ.
ತಾಯಲೂರು ಹೊರ ಠಾಣೆಗೆ ಮರಳಿ ದಕ್ಕುವುದೇ?: ಒಟ್ಟಿನಲ್ಲಿ ಆಂಗ್ಲರ ಕಾಲದಲ್ಲಿಯೇ ತಾಯಲೂರು ಹೊರ ಠಾಣೆಗೆ ಸಾಕಷ್ಟು ಜಮೀನು ಮಂಜೂರಾಗಿದ್ದರೂ ಮುಖಂಡರು ವಿವಿಧ ಕಾರಣಗಳಿಗಾಗಿ ಬಹುತೇಕ ಜಮೀನನ್ನು ಅತಿಕ್ರಮಿಸಿಕೊಂಡಿದ್ದು ಇನ್ನಾದರೂ ಜಿಲ್ಲಾ ರಕ್ಷಣಾಧಿಕಾರಿಗಳಾದ ಎಂ.ನಾರಾಯಣ ಅವರ ಅಧಿಕಾರದಲ್ಲಾದರೂ ಪರರ ಪಾಲಾಗಿರುವ ಆಂಗ್ಲರ ಕಾಲದ ಜಮೀನು ತಾಯಲೂರು ಹೊರ ಠಾಣೆಗೆ ಮರಳಿ ದಕ್ಕುವುದೇ..? ಕಾದು ನೋಡಬೇಕಾಗಿದೆ.
ಎಲ್ಲಿ ಏನೇ ಕಳುವಾದರೂ ಹುಡುಕಿ ಕೊಡುವ ಪೊಲೀಸ ರಿಗೆ ತನ್ನದೇ ನೂರಾರು ವರ್ಷಗಳ ಹಿಂದೆ ತಾಯಲೂರು ಹೊರ ಠಾಣೆಗೆ 4.1 ಎಕರೆ ಜಮೀನು ಮಂಜೂರಾಗಿದ್ದರೂ, ಅದರಲ್ಲಿ ಸಾಕಷ್ಟು ಜಮೀನು ಕೆಲವು ದಶಕಗಳಿಂದ ಪರರ ಪಾಲಾಗಿದ್ದರೂ ಸ್ಥಳೀಯ ಪೊಲೀಸರಿಂದ ವಶಪಡಿಸಿಕೊಳ್ಳಲಾಗದೇ ಇರುವುದರಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇತ್ತ ಕಡೆ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ. – ಮುರಳಿ, ದಲಿತ ಮುಖಂಡ ಮುಳಬಾಗಿಲು
ಮುಳಬಾಗಿಲು ತಾಲೂಕು ಗ್ರಾಮಾಂತರ ಠಾಣೆ ಮತ್ತು ತಾಯಲೂರು ಹೊರ ಠಾಣೆಗೆ ಮಂಜೂರಾಗಿದ್ದ ಜಮೀನುಗಳು ಹಲವಾರು ವರ್ಷಗಳ ಹಿಂದೆಯೇ ಬೇರೆ ಬೇರೆ ಕಾರಣಗಳಿಗೆ ಬೇರೆ ಸಂದರ್ಭದಲ್ಲಿ ಪರಬಾರೆಯಾಗಿದ್ದು, ಸರ್ವೆ ಮಾಡಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಶೀಘ್ರವೇ ಸರ್ವೆ ಕಾರ್ಯ ನಡೆಯಲಿದೆ. – ಎಂ.ನಾರಾಯಣ್, ಜಿಲ್ಲಾ ರಕ್ಷಣಾಧಿಕಾರಿಗಳು ಕೋಲಾರ
-ಎಂ.ನಾಗರಾಜಯ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್