ಸಿಎಂ ಬೊಮ್ಮಾಯಿಗೆ ಕಪ್ಪು ಬಾವುಟ ಪ್ರದರ್ಶನ ಯತ್ನ: ಯುವಕರು ಪೊಲೀಸ್ ವಶಕ್ಕೆ
ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹ
Team Udayavani, Aug 1, 2022, 3:55 PM IST
ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಮಾದಿಗ ಸಮಾಜದ ಯುವಕರು ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶ ಮಾಡಿ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಗಂಗಾವತಿ ನಗರದ ಸೋಮನಾಥ ಕಂಪ್ಲಿ ಹಾಗೂ ಬಾಳಪ್ಪ ಕಾಮದೊಡ್ಡಿ ಎಂಬ ಯುವಕರು ಸದಾಶಿವ ವರದಿ ಅನುಷ್ಠಾನದ ಮೂಲಕ ಎಸ್ಸಿ ಮೀಸಲಾತಿ ಯನ್ನು ಒಳ ಮೀಸಲಾತಿ ಮಾಡುವಂತೆ ಆಗ್ರಹಿಸಿ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಹೋರಾಟದ ಫಲವಾಗಿ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಸದಾಶಿವ ವರದಿ ಅನುಷ್ಠಾನ ಮಾಡುತ್ತಿಲ್ಲ, ಇದರಿಂದ ಎಸ್ಸಿ ಸಮಾಜಕ್ಕೆ ವಿಶೇಷವಾಗಿ ಮಾದಿಗ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಿ ಕಪ್ಪು ಬಾವುಟ ಪ್ರದರ್ಶಿಸಿದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಸೋಮನಾಥ್ ಕಂಬಳಿ ಮಾತನಾಡಿ ಎಸ್ಸಿ ಮೀಸಲಾತಿ ಅಡಿ ಯಲ್ಲಿ ಇರುವ ಮಾದಿಗ ಸಮಾಜವು ಅತ್ಯಂತ ಹಿಂದುಳಿದಿದೆ ಎಸ್ಸಿ ಮೀಸಲಾತಿಯನ್ನು ಇತರೆ ಕೆಲವು ವರ್ಗಗಳ ನೀಡಿದ್ದು ಇದರಿಂದ ಮಾದಿಗ ಸಮಾಜಕ್ಕೆ ಸಂಪೂರ್ಣ ಅನ್ಯಾಯವಾಗುತ್ತಿದೆ . ಆದ್ದರಿಂದ ಎಸ್.ಎಂ.ಕೃಷ್ಣ ಸರ್ಕಾರದಿಂದ ಹಿಡಿದು ಇಲ್ಲಿಯವರೆಗೂ ಯಾವ ಸರ್ಕಾರವೂ ಎಸ್ಸಿ ಒಳಮೀಸಲು ಕಲ್ಪಿಸುವಂತೆ ಹೋರಾಟವನ್ನು ನಿರ್ಲಕ್ಷ್ಯ ಮಾಡಿವೆ .ಕೂಡಲೇ ಎಸ್ಸಿ ಮೀಸಲಾತಿ ವರ್ಗೀಕರಣ ಮಾಡಿ ಜನಸಂಖ್ಯೆ ಆಧಾರದ ಮೇಲೆ ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿದರು.