ಡಿ.5 ; ಗಂಗಾವತಿಯಲ್ಲಿ ಹನುಮ ಸಂಕೀರ್ತನ ಯಾತ್ರೆ: 45 ಸಾವಿರ ಮಾಲಾಧಾರಿಗಳು ಭಾಗಿ
Team Udayavani, Nov 17, 2022, 10:25 PM IST
ಗಂಗಾವತಿ: ಹನುಮದ್ ವ್ರತಾಚರಣೆ ನಿಮಿತ್ತ ಹನುಮಮಾಲೆಧಾರಣೆ ಮಾಡಿದ 45 ಸಾವಿರಕ್ಕೂ ಹೆಚ್ಚು ಹನುಮಭಕ್ತರು ಕಿಷ್ಕಿಂದಾ ಅಂಜನಾದ್ರಿಗೆ ಆಗಮಿಸಲಿದ್ದು ಡಿ.5 ರಂದು ಗಂಗಾವತಿ ನಗರದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆಯು ನಡೆಯಲಿದ್ದು ಸರ್ವಹಿಂದೂಬಾಂಧವರು ಪಾಲ್ಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.
ಅವರು ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಹಿಂದೂ ಸಮಾಜವನ್ನು ಜಾಗೃತಿಗೊಳಿಸಿ ಭಕ್ತಿ ಮಾರ್ಗದಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕೆಲಸ ಮಾಡುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಭೂಮಿಯಾಗಿದ್ದಾರೆ ಕನ್ನಡ ನಾಡಿನ ಗಂಗಾವತಿ ಹನುಮಂತನ ಜನ್ಮಭೂಮಿಯಾಗಿದೆ. ಹಿಂದೂ ಯುವಕರಲ್ಲಿ ದುರ್ಗುಣಗಳನ್ನು ನಿವಾರಿಸಿ ಸದ್ಗುಣಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಹನುಮಂತನ ಹೆಸರಿನಲ್ಲಿ ವ್ರತಾಚಾರಣೆಯನ್ನು ಪ್ರಾರಂಭಿಸಿದ್ದಾರೆ. ಈ ವರ್ಷ 45 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದೆ. ಡಿ.5 ರಂದು ಮಾಲೆ ವಿಸರ್ಜನೆ ಮತ್ತು ದರ್ಶನ ಪಡೆಯಲು ಮಾಲಾಧಾರಿಗಳು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಂದು ಗಂಗಾವತಿ ನಗರದಲ್ಲಿ ಬೃಹತ್ ಸಂಕೀರ್ತನ ಯಾತ್ರೆ ನಡೆಯಲಿದ್ದು ಸರ್ವ ಸಮಾಜದ ಮುಖಂಡರ ನೇತೃತ್ವದಲ್ಲಿ ಮಾಲಾಧಾರಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಬೇಕೆಂದರು.
ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಮಾತನಾಡಿ, ಹಿಂದೂ ಸಮಾಜವನ್ನು ಜಾಗೃತಿಗೊಳಿಸಿ ಭಕ್ತಿ ಮಾರ್ಗದ ಮೂಲಕ ಸದ್ಗುಣಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಬಜರಂಗದಳ ಹನುಮ ಮಾಲೆ ಕಾರ್ಯಕ್ರಮ ಪ್ರಾರಂಭಿಸಿದೆ. ಸರಕಾರವೂ ಕೂಡಾ ಇಂದು ಮಾಲೆ ಕಾರ್ಯಕ್ರಮದ ಅಚ್ಚು ಕಟ್ಟು ವ್ಯವಸ್ಥೆಗೆ ಸಿದ್ಧತೆ ಮಾಡುತ್ತಿದೆ. ಆದರೆ ಹಿಂದೂ ಸಮಾಜವನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿ ಅಂಜನಾದ್ರಿಗೆ ಬರುವ ಪ್ರತಿಯೊಬ್ಬ ಭಕ್ತರಿಗೂ ಯಾವ ತೊಂದರೆಯಾಗದಂತೆ ಗಂಗಾವತಿ ಜನ ಅನುಕೂಲ ಮಾಡಿಕೊಡುವಂತಾಗಬೇಕೆಂದರು.
ಸಭೆಯಲ್ಲಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು, ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ, ತಿಪ್ಪೇರುದ್ರಸ್ವಾಮಿ, ನಾಗರಾಜ ಬಿಲ್ಗಾರ್, ಸಂತೋಷ ಕೆಲೋಜಿ, ಹುಸೇನಪ್ಪಸ್ವಾಮಿ ಮಾದಿಗ, ರವೀಂದ್ರ ಹೂಲಗೇರಿ, ಯಮನೂರ ಚೌಡ್ಕಿ, ನಾಗರಾಜ ಚಳಗೇರಿ, ಹೆಚ್.ಸಿ.ಯಾದವ ವಕೀಲರು ಸೇರಿದಂತೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಇದ್ದರು.