ಕುಷ್ಟಗಿ: 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ ಆಯೋಜನೆ ಕುರಿತು ಚರ್ಚೆ
Team Udayavani, Nov 4, 2022, 10:52 AM IST
ಕುಷ್ಟಗಿ: ತಾಲೂಕಿನ ಹನುಮಸಾಗರದಲ್ಲಿ ನಿಗದಿಯಾಗಿದ್ದ ಕೋವಿಡ್ 2ನೇ ಅಲೆ ಕಾರಣದಿಂದ ಮುಂದೂಡಿದ್ದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮತ್ತೆ ಆಯೋಜಿಸುವುದು ಯಾವಾಗ ಎಂಬ ಪ್ರಶ್ನೆ ಸಾಹಿತ್ಯ ವಲಯದಲ್ಲಿ ವ್ಯಕ್ತವಾಗಿದೆ.
ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ಹಿಂದಿನ ಅಧ್ಯಕ್ಷ ರಾಜಶೇಖರ ಅಂಗಡಿ ನೇತೃತ್ವದಲ್ಲಿ ಕಳೆದ 2021ರ ಏಪ್ರೀಲ್ 1-2ರಂದು ಸಮ್ಮೇಳನ ಆಯೋಜಿಸಲು ಉತ್ಸುಕರಾಗಿದ್ದರು. ಆಗ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ತಜ್ಞ ಡಾ. ಉದಯ ಪುರಾಣಿಕರನ್ನು ಸಮ್ಮೇಳನಾಧ್ಯಕರನ್ನಾಗಿ ಆಯ್ಕೆಯೂ ಆಗಿತ್ತು.
ಸಮ್ಮೇಳನಾಧ್ಯಕ್ಷರಿಗೆ ಕಸಾಪ ಅಧಿಕೃತ ಅಹ್ವಾನ ನೀಡಲಾಗಿತ್ತು. ಇನ್ನೇನು ಸಮ್ಮೇಳನ ಕೇವಲ ನಾಲ್ಕು ದಿನಗಳು ಇರುವಾಗಲೇ ಆಗಿನ ತಹಶೀಲ್ದಾರ ಎಂ.ಸಿದ್ದೇಶ, ಸರ್ಕಾರದ ಕೋವಿಡ್ ಮುನ್ನೆಚ್ಚರಿಕೆ ಆದೇಶ ನೆಪವೊಡ್ಡಿ ಕೋವಿಡ್ 2ನೇ ಅಲೆ ಕಾರಣದಿಂದ ಅವಕಾಶ ನಿರಾಕರಿಸಿದ್ದರಿಂದ ಸಮ್ಮೇಳನ ಅನಿವಾರ್ಯವಾಗಿ ಮುಂದೂಡಬೇಕಾಯಿತು.
ಕಳೆದ ಅವಧಿಯ ಕಸಾಪ ಜಿಲ್ಲಾಧ್ಯಕ್ಷರಾಗಿದ್ದ ರಾಜಶೇಖರ ಅಂಗಡಿ, ಹನುಮಸಾಗರದಲ್ಲಿ ನಿಗದಿಯಾಗಿದ್ದ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದ್ದು, ರದ್ದುಪಡಿಸಿಲ್ಲ. ಮುಂದಿನ ಅಧ್ಯಕ್ಷರ ನೇತೃತ್ವದಲ್ಲಿ ಸಮ್ಮೇಳನ ಆಯೋಜನೆಯಾಗಲಿದ್ದು, ಸಮ್ಮೇಳನ ಸ್ಥಳ, ಸರ್ವಾಧ್ಯಕ್ಷರು ಬದಲಾಗದು ಎಂದಿದ್ದರು.
ನಂತರ ಕಸಾಪ ಚುನಾವಣೆಗಳು ನಡೆದು ಕಸಾಪ ಜಿಲ್ಲಾ ಅಧ್ಯಕ್ಷರಾಗಿ ಶರಣಗೌಡ ಪೊಲೀಸ ಪಾಟೀಲ ಚುನಾಯಿತರಾದ ಬಳಿಕ ಅಧ್ಯಕ್ಷರ ನೇತೃತ್ವದಲ್ಲಿ ಸಮ್ಮೇಳನ ಆಯೋಜಿಸುವ ಬಗ್ಗೆ ಚಕಾರವೆತ್ತದೇ ಇರುವುದು ಇದೀಗ ಪ್ರಶ್ನೆಯಾಗಿದೆ.
ಸದ್ಯ ಯಾವುದೇ ಕೋವಿಡ್ ಭಯ ಇಲ್ಲ. ಕೋವಿಡ್ ಕಾರಣದಿಂದ 2020-21ನೇ ಜಿಲ್ಲಾ ಸಮ್ಮೇಳನದ ಅನುದಾನ 5 ಲಕ್ಷ ರೂ. ಬಳಸಿಕೊಳ್ಳದೆ ಹಾಗೆಯೇ ಇದ್ದು, ಈ ಅನುದಾನವನ್ನು 2022-23ನೇ ಸಾಲಿನ ಅನುದಾನದಲ್ಲಿ ಮುಂದೂಡಿದ ಸಮ್ಮೇಳನ ವಾರ್ಷಾಂತ್ಯದಲ್ಲಿ ಆಯೋಜಿಸಬೇಕೆನ್ನುವ ಹಕ್ಕೋತ್ತಾಯ ಸಾಹಿತ್ಯಾಸಕ್ತರಿಂದ ವ್ಯಕ್ತವಾಗಿದೆ.
ಕಸಾಪ ರಾಜ್ಯಾಧ್ಯಕ್ಷರ ಅನುಮತಿ?:
ಜಿಲ್ಲೆಯಲ್ಲಿ ತಾಲೂಕು- ಜಿಲ್ಲಾ ಸಮ್ಮೇಳನ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಅನುಮತಿ ಪಡೆದುಕೊಳ್ಳುವ ನಿಯಮವಿದೆ. ಅದರೆ ಹಾವೇರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಬಳಿಕ ತಾಲೂಕು-ಜಿಲ್ಲಾ ಸಮ್ಮೇಳನ ಆಯೋಜಿಸಬೇಕೆನ್ನುವ ನಿರ್ದೇಶನ ಸರಿ ಅಲ್ಲ. ಹಾವೇರಿಯ ರಾಜ್ಯ ಮಟ್ಟದ ಅಖಿಲ ಭಾರತ ಸಮ್ಮೇನಳನ ಮುಗಿಯುವವರೆಗೂ ಕಾಯಬೇಕೆ? ಎನ್ನುವ ಪ್ರಶ್ನೆ ವ್ಯಕ್ತವಾಗಿದೆ.