ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಒಳಿತಾಗಲು ಜನಾರ್ದನ ರೆಡ್ಡಿ ದಂಪತಿಗಳಿಂದ ಅಜ್ಮೀರ್ ದರ್ಗಾಕ್ಕೆ ಹರಕೆ
Team Udayavani, Jan 23, 2023, 12:55 PM IST
ಗಂಗಾವತಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 40 ಸ್ಥಾನಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಮುಂದಿನ ಸರಕಾರದ ರಚನೆಯ ಸಂದರ್ಭದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಯೋಜನೆಯಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಇತಿಹಾಸ ಪ್ರಸಿದ್ಧ ಭಾವೈಕ್ಯ ಕೇಂದ್ರವೆಂದು ಖ್ಯಾತಿ ಪಡೆದ ಅಜ್ಮೀರ ದರ್ಗಾ ಉರುಸ್ ಶರೀಫ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದರ್ಗಾಕ್ಕೆ ಚಾದರ್ ಹಾಗೂ ಗುಲಾಬಿ ಪುಷ್ಪಗಳನ್ನು ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಅಜ್ಮೀರ್ ದರ್ಗಾ ಸೂಫಿ ಸಂತರ ಶ್ರದ್ದಾ ಕೇಂದ್ರವಾಗಿದ್ದು, ಇಲ್ಲಿಗೆ ದೇಶ ವಿದೇಶಗಳ ನಾನಾ ಧರ್ಮಿಯರು ಆಗಮಿಸುವ ಈ ಧರ್ಮ ಕೇಂದ್ರದಲ್ಲಿ ದೇವರು ಭಕ್ತರ ಬೇಡಿಕೆ ಈಡೇರಿಸುವ ನಂಬಿಕೆ ಇದೆ. ಕರ್ನಾಟಕದ ಪ್ರಗತಿಗಾಗಿ ಸ್ಥಾಪಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಗೆ ಅಜ್ಮೀರ ದರ್ಗಾ ಸ್ವಾಮೀಜಿ ಆಶೀರ್ವಾದ ಮಾಡಲಿ, ದೇಶದ ಜನತೆಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಜ್ಮೀರ ದರ್ಗಾದ ಗುರುಗಳಾದ ಸೂಫಿ ಸಂತ ಸಲ್ಮಾನ್ ಚಿಷ್ಟಿ, ರೆಡ್ಡಿ ಧರ್ಮಪತ್ನಿ ಲಕ್ಷ್ಮೀ ಅರುಣಾ, ಆಪ್ತ ಅಲಿಖಾನ್ ಸೇರಿ ಕುಟುಂಬ ವರ್ಗದವರಿದ್ದರು.