ಕುಷ್ಟಗಿ: ಬಿಜೆಪಿ ಹೆಸರಿಗೆ ಮಾತ್ರ ಡಬಲ್ ಇಂಜಿನ್ ಸರ್ಕಾರ; ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್
Team Udayavani, Dec 16, 2022, 2:31 PM IST
ಕುಷ್ಟಗಿ: ಡಬಲ್ ಇಂಜಿನ್ ಬರೀ ಸೌಂಡ್ ಮಾತ್ರ. ಸೈಲೆನ್ಸರ್ ಸೌಂಡ್ ನ ಡಬಲ್ ಇಂಜಿನ್. ಇದು ಹೆಸರಿಗೆ ಮಾತ್ರ ಡಬಲ್ ಇಂಜಿನ್ ಸರ್ಕಾರ ಎಂದು ವಿದಾನಸಭೆ ವಿರೋಧ ಪಕ್ಷದ ಉಪ ನಾಯಕ, ಉಳ್ಳಾಲ ಶಾಸಕ ಯು.ಟಿ. ಖಾದರ್ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಇಲ್ಲಿನ ಟಿಎಪಿಸಿಎಂಎಸ್ ಮೈದಾನದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ 69ನೇ ಹುಟ್ಟು ಹಬ್ಬ ಹಾಗೂ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಾನವೀಯತೆ, ಕರುಣೆ ಇಲ್ಲದ ಸರ್ಕಾರ ಆಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಜಾರಿಯಲ್ಲಿದ್ದ ಶವ ಸಂಸ್ಕಾರಕ್ಕೆ 5 ಸಾವಿರ ರೂ. ಯೋಜನೆ ಅನುಷ್ಠಾನಕ್ಕೆ ತಂದಿದ್ದರು. ಆದರೆ ಈ ಬಿಜೆಪಿ ಸರ್ಕಾರ ಶವಸಂಸ್ಕಾರ ಯೋಜನೆ ರದ್ದುಗೊಳಿಸಿದ ಮಾನವೀಯತೆ ಮರೆತ ಸರ್ಕಾರ ಎಂದು ಜರಿದರು.
ಶಾಸಕ ಬಯ್ಯಾಪೂರ ಅನುಭವಿ ಶಾಸಕರು. ಇಂತಹ ಶಾಸಕರನ್ನು ಪಡೆದಿರುವುದು ಈ ಕ್ಷೇತ್ರದ ಜನರು ಪುಣ್ಯವಂತರು. ಇಂತಹ ಶಾಸಕರನ್ನು ಬಿಜೆಪಿ ಕುತಂತ್ರಗಳಿಗೆ ಅವಕಾಶ ನೀಡದೆ ಮತ್ತೊಮ್ಮೆ ಬಯ್ಯಾಪೂರ ಅವರನ್ನು ಗೆಲ್ಲಿಸಬೇಕು ಎಂದರು.