ಜಿಲ್ಲಾದ್ಯಂತ ಇಂದು ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ
Team Udayavani, Jul 9, 2021, 7:58 PM IST
ಕೊಪ್ಪಳ: ಕೋವಿಡ್ ನಿಯಂತ್ರಣದ ಬಳಿಕ ಜಿಲ್ಲೆಯ ಜನರಲ್ಲಿ ಖುಷಿಯ ಭಾವನೆ ಮೂಡಿದೆ. ಹಬ್ಬಗಳಲ್ಲಿ ಸಂಭ್ರಮ, ಸಡಗರದಿಂದ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಪ್ರಸಿದ್ಧ ಹಬ್ಬವೆನಿಸಿರುವ ಮಣ್ಣೆತ್ತಿನ ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದ್ದಾರೆ.
ಪ್ರತಿ ವರ್ಷವೂ ಸಂಪ್ರದಾಯದಂತೆ ಮಣ್ಣೆತ್ತಿನ ಅಮಾವಾಸ್ಯೆಯ ಮುನ್ನ ಕುಂಬಾರರರು ಹಳ್ಳ, ಕೊಳ್ಳ ಹಾಗೂ ಹೊಲ ಗದ್ದೆಗಳಿಂದ ಮಣ್ಣನ್ನು ತಂದು ನೀರಿನಲ್ಲಿ ನೆನೆಯಿಟ್ಟು ಹದ ಮಾಡಿ ಮಣ್ಣಿನಿಂದಲೇ ಜೋಡೆತ್ತುಗಳನ್ನು ಮಾಡುತ್ತಿದ್ದರು. ಎತ್ತುಗಳಿಗೆ ಗೋದಲಿಯನ್ನೂ ಸಿದ್ಧಪಡಿಸಿ ಪ್ರತಿ ಮನೆ ಮನೆಗೂ ಗ್ರಾಮೀಣ ಭಾಗದಲ್ಲಿ ವಿತರಣೆ ಮಾಡುವ ಸಂಪ್ರದಾಯ ಇಂದಿಗೂ ಮುನ್ನಡೆದಿದೆ.
ನಗರ ಪ್ರದೇಶದಲ್ಲಿ ತಳ್ಳು ಬಂಡಿಯಲ್ಲಿ ಎತ್ತುಗಳನ್ನು ಇರಿಸಿ ಮಾರಾಟ ಮಾಡುತ್ತಾರೆ. ರೈತಾಪಿ ವರ್ಗಕ್ಕೆ ಎತ್ತುಗಳೇ ದೇವರ ಸ್ವರೂಪಿಗಳಾಗಿವೆ. ಕಾಯಕದಲ್ಲಿ ತೊಡಗುವ ಎತ್ತುಗಳನ್ನೇ ದೇವರ ರೂಪದಲ್ಲಿ ಪೂಜೆ ಮಾಡುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ಕಾರು ಹುಣ್ಣಿಮೆಯಲ್ಲಿ ಎತ್ತುಗಳನ್ನು ಅದ್ಧೂರಿಯಿಂದ ಮೆರವಣಿಗೆ ಮಾಡಿದರೆ, ಮಣ್ಣೆತ್ತಿನ ಅಮಾವಾಸ್ಯೆಯ ವೇಳೆ ಮಣ್ಣಿನ ಎತ್ತುಗಳನ್ನು ಪೂಜೆ ಮಾಡಿ ಸಂಜೆ ವೇಳೆ ಭಕ್ತಿಯಿಂದಲೇ ನದಿತಟಗಳಿಗೆ ವಿಸರ್ಜನೆ ಮಾಡುವ ಸಂಪ್ರದಾಯವಿದೆ.’ ಗ್ರಾಮೀಣ ಭಾಗದಲ್ಲಿ ಹುಡುಗರು ಎತ್ತಿನ ಗುಡಿಯನ್ನು ಮಾಡಿ ಮನೆ ಮನೆಯಿಂದ ಕಾಳು ಕೇಳಿ ತಂದು ಸಿಹಿ ಊಟ ಮಾಡಿ ಪೂಜ್ಯನೀಯವಾಗಿ ಮಣ್ಣಿನ ಎತ್ತು ವಿಸರ್ಜನೆ ಮಾಡುವ ಪದ್ಧತಿಯಿದೆ. ಈ ಹಬ್ಬದ ಸಡಗರವೂ ಜೋರಾಗಿಯೇ ನಡೆಯುತ್ತದೆ.