ಗೊಂದಲದ ಗೂಡಾದ ನಗರಸಭೆಯ ವಾಣಿಜ್ಯ ಮಳಿಗೆಗಳ ಹರಾಜು
Team Udayavani, Apr 19, 2022, 1:05 PM IST
ಗಂಗಾವತಿ: ಗಂಗಾವತಿ ನಗರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಗೊಂದಲದ ಗೂಡಾಗಿ ಮಾರ್ಪಾಡಾಗಿದೆ.
ನಗರದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿದ್ದು ಇವುಗಳು ನಗರದ ಬೇರೆ ಬೇರೆ ಕಡೆ ಇವೆ ಇವುಗಳ ಪೈಕಿ ಬಹುತೇಕ ಮಳಿಗೆಗಳು ಕಳೆದ 20ವರ್ಷಗಳಿಂದ ಹರಾಜು ಮಾಡಿಲ್ಲ. ಇದರಲ್ಲಿ ಬಹುತೇಕ ಮಳಿಗೆ ಪಡೆದ ವ್ಯಕ್ತಿಗಳು ಬೇರೆಯವರಿಗೆ ಬಾಡಿಗೆಗೆ ಕೊಟ್ಟಿದ್ದಾರೆ ಎಂಬ ದೂರಿನಿಂದಾಗಿ ನೂತನವಾಗಿ ಪ್ರಭಾರಿ ಪೌರಾಯುಕ್ತರಾಗಿ ಬಂದ ಹೇಮಂತ್ ಕುಮಾರ್ ಅವರಿಗೆ ಕೆಲ ಸಂಘ ಸಂಸ್ಥೆಯವರು ದೂರು ನೀಡಿದ್ದರಿಂದ ತಮ್ಮ ಎಲ್ಲ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಪ್ರಭಾರಿ ಪೌರಾಯುಕ್ತ ಹೇಮಂತ್ ಕುಮಾರ್ ಕರೆದಿದ್ದಾರೆ .
ಮಂಗಳವಾರ ಎಲ್ಲ ಮಳಿಗೆಗಳ ಹರಾಜು ಪ್ರಕ್ರಿಯೆ ನಗರದ ಐಎಂಎ ಭವನದಲ್ಲಿ ನಡೆದಿದ್ದು ಈಗಾಗಲೇ ಬಾಡಿಗೆ ಯಲ್ಲಿರುವವರು ಮತ್ತು ನೂತನವಾಗಿ ಬಾಡಿಗೆ ಪಡೆಯಲು ಬಂದವರ ಮಧ್ಯೆ ವಾಗ್ವಾದ ನಡೆದ ಘಟನೆ ಜರುಗಿದೆ .ಈ ಮಧ್ಯೆ ಪತ್ರಿಕಾ ಮಾಧ್ಯಮದವರನ್ನು ಹೊರಗಿಟ್ಟು ಹೇಮಂತಕುಮಾರ್ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಿದ್ದಾರೆ.ಕೆಲ ಮಳಿಗೆಗಳಿಗೆ ಠೇವಣಿಯಾಗಿ ಹಣವನ್ನು ನಿಗದಿ ಮಾಡಲಾಗಿದ್ದು ಇದು ಅವೈಜ್ಞಾನಿಕವಾಗಿದೆ.
ಹಳೆ ತಹಸೀಲ್ದಾರ್ ಕಚೇರಿ ಎದುರಿಗಿರುವ ಮಳಿಗೆಗಳು ವರ್ತಕರೇ ನಿರ್ಮಿಸಿಕೊಂಡಿರುವವರಿಂದ ನಾವುಗಳೇ ಪುನಃ ಹರಾಜು ಟೆಂಡರ್ ನಲ್ಲಿ ಭಾಗಿಯಾಗುತ್ತೇವೆ ರಾಗಿರುತ್ತೇವೆ ಎಂದು ಮಳಿಗೆಯ ವರ್ತಕರು ಹೇಮಂತ್ ಕುಮಾರ್ ಎದುರು ವಾಗ್ವಾದ ನಡೆಸಿದರು. ಎಲ್ಲರನ್ನೂ ಪೊಲೀಸರ ನೆರವಿನಿಂದ ಹೊರಗೆ ಕಳಿಸಿದರು. ಕನಕಗಿರಿ ರಸ್ತೆ ,ಜುಲೈ ನಗರ, ಬಸ್ ನಿಲ್ದಾಣ ಮತ್ತು ಇತರೆ ಭಾಗದಲ್ಲಿರುವ ಮಳಿಗೆಗಳ ಹರಾಜು ನಡೆಸಿದರು.
ಜನಪ್ರತಿನಿಧಿಗಳ ಮಾತಿಗೂ ಬಗ್ಗದ ಪೌರಾಯುಕ್ತರು : ನಗರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಕುರಿತಂತೆ ಕೆಲವು ವರ್ತಕರು ಶಾಸಕರು ಸಂಸದರು ಮತ್ತು ಮಾಜಿ ಎಂಎಲ್ ಸಿ ಮಾಜಿ ಸಚಿವರ ಸ್ಥಳಕ್ಕೆ ತೆರಳಿ ಶೇಕಡವಾರು ಬಾಡಿಗೆ ಹೆಚ್ಚು ಮಾಡಲಿ ಬೇರೆಯವರಿಗೆ ಹರಾಜು ಕರೆಯುವುದು ಬೇಡ ಎಂದು ಒತ್ತಡ ತಂದರೂ ಪ್ರಭಾರಿ ಪೌರಾಯುಕ್ತ ಹೇಮಂತ್ ಕುಮಾರ್ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಪುನಃ ಹರಾಜು ಪ್ರಕ್ರಿಯೆ ನಡೆಸಿರುವುದು ಕಂಡುಬಂದಿದೆ.