ರಸ್ತೆಯಲ್ಲೇ ಹಪ್ಪಳ ಕರಿದು ಪ್ರತಿಭಟನೆ!
Team Udayavani, Feb 19, 2020, 3:13 PM IST
ಸಾಂಧರ್ಬಿಕ ಚಿತ್ರ
ಕುಷ್ಟಗಿ: ಜನಸಾಮನ್ಯರ ಅಗತ್ಯ ವಸ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಮಹಿಳೆಯರು, ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಸೌದೆ ಒಲೆಯಲ್ಲಿ ಹಪ್ಪಳ ಕರಿದು ವಿನೂತನ ಪ್ರತಿಭಟನೆ ನಡೆಸಿದರು.
ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಮಾಲತಿ ನಾಯಕ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಲಾಡ್ಲೆಮಷಕ್ ದೋಟಿಹಾಳ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ನೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿಸಿರುವುದು ಅಚ್ಚೇ ದಿನವೇ? ಪ್ರಶ್ನಿಸಿದರು. ನಂತರ ಬಸವೇಶ್ವರ ವೃತ್ತದಲ್ಲಿ ಸೌಧೆ ಒಲೆಯಲ್ಲಿ ಹಪ್ಪಳ ಕರಿದು ಸಾರ್ವಜನಿಕರಿಗೆ ಹಂಚಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ನಾಯಕ ಅವರು, ಗ್ಯಾಸ್ ಸಿಲಿಂಡರ್ ಬೆಲೆ 145 ರೂ.ಗೆ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಹಣದುಬ್ಬರ, ದಿನ ಬಳಕೆ ಸಾಮಾಗ್ರಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳಿಗೆ ಜನ ತತ್ತರಿಸಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಅಗ್ಗದ ಪ್ರಚಾರಕ್ಕಾಗಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಿಲಿಂಡರ್, ಸ್ಟೌವ್ ಇತ್ಯಾ ನೀಡಿದ್ದು, ಇದೀಗ ಬೆಲೆ ಏರಿಕೆ ಕಾಣಿಕೆ ನೀಡಿದೆ ಎಂದು ವ್ಯಂಗವಾಡಿದರು. ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಲಾಡ್ಲೆ ಮಷಕ್ ದೋಟಿಹಾಳ ಮಾತನಾಡಿ, ಕೇಂದ್ರ ಸರ್ಕಾರ ಆರ್ಥಿಕ ನೀತಿಗಳಿಂದ ದಿನೇ ದಿನೇ ಗ್ಯಾಸ್ ಸಿಲಿಂಡರ್ ಬೆಲೆ ಹಾಗೂ ಪೆಟ್ರೋಲ್, ಡಿಜೆಲ್ ಏರಿಕೆಯಾಗುತ್ತಿದ್ದು, ಇಳಿಕೆಯ ಪ್ರಶ್ನೆ ಇಲ್ಲ ಎಂದರು.
ಭಾರತೀ ನೀರಗೇರಿ, ಅಯಶಾಖಾನಂ, ತಾ.ಪಂ. ಸದಸ್ಯ ಸುರೇಶ ಕುಂಟಗೌಡ್ರು, ಪುರಸಭೆ ಸದಸ್ಯರಾದ ಸೈಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ, ಶರಣಪ್ಪ ತುರಕಾಣಿ, ಮಹಾಂತೇಶ ಹಾಗಲದಾಳ, ಇಮಾಮ್ ಸಾಬ್, ಹನುಮೇಶ ಭೋವಿ, ವೀರೇಶ, ಬಸವರಾಜ್ ಬಂಡೇರ್ ಮತ್ತಿತರಿದ್ದರು.