ನಾನು ರಾಜಕೀಯಕ್ಕೆ ಬರಲು ರೆಡ್ಡಿ ಕಾರಣ: ಸಚಿವ ಆನಂದ ಸಿಂಗ್
Team Udayavani, Jan 2, 2023, 9:46 PM IST
ಕೊಪ್ಪಳ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಕಟ್ಟಿದ್ದಾರೆಂದು ಕೇಳಿದ್ದೇನೆ. ನಾನು ಮಾಧ್ಯಮವನ್ನು ಅಷ್ಟೊಂದು ನೋಡಲ್ಲ. ನಾನು ಅವರು ಹೊಸ ಪಕ್ಷ ಮಾಡಿರುವ ವಿಷಯ ಕೆಲವರಿಂದ ಕೇಳಿದ್ದೇನೆ. ಅವರು ನನ್ನ ಅತ್ಯಂತ ಆತ್ಮೀಯ ಸ್ನೇಹಿತರು. ಇಂದು ನಾನೇನಾದರೂ ರಾಜಕೀಯದಲ್ಲಿ ಬಂದಿದ್ದೇನೆ ಎಂದರೆ ಅವರೇ ಪ್ರಮುಖ ಕಾರಣ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದಾಗ ಅವರೇ 2008ರಲ್ಲಿ ನನಗೆ ಸ್ಪರ್ಧೆ ಮಾಡುವಂತೆ ಹೇಳಿದರು. ಅವರು ನನಗೆ ಧೈರ್ಯ ತುಂಬಿದ ಸ್ನೇಹಿತ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಪಕ್ಷ ಕಟ್ಟಬಹುದು. ನಾನು ಅವರಿಗೆ ಶುಭ ಕೋರಬಹುದೇ ವಿನಃ ಮತ್ತೇನೂ ಮಾಡಲು ಆಗಲ್ಲ. ನನ್ನ ಹಾಗೂ ಅವರ ಸ್ನೇಹ ಯಾವತ್ತೂ ಇರುತ್ತದೆ. ಚುನಾವಣೆ ಮೊದಲೂ ಸ್ನೇಹ ಇದೆ. ಚುನಾವಣೆ ನಂತರವೂ ನನ್ನ ಸ್ನೇಹ ಇರುತ್ತದೆ. ನಮ್ಮ ಸ್ನೇಹದಲ್ಲಿ ಯಾವುದೇ ಬಿರುಕಿಲ್ಲ. ರೆಡ್ಡಿ ಅವರನ್ನು ಬಿಜೆಪಿಗೆ ವಾಪಸ್ ಕರೆ ತರಲು ನಾನು ಅವರ ಮನವೊಲಿಸುವಂತಹ ದೊಡ್ಡ ವ್ಯಕ್ತಿಯಲ್ಲ. ಅದನ್ನು ವರಿಷ್ಠರು ನೋಡಿಕೊಳ್ಳುತ್ತಾರೆ. ರೆಡ್ಡಿ ಅವರ ವಿಚಾರದಲ್ಲಿ ಭವಿಷ್ಯ ಹೇಳಲಾಗಲ್ಲ ಎಂದರು.