ʼಉದಯವಾಣಿ’ ವರದಿಗೆ ಸ್ಫಂದಿಸಿದ ಸಿಎಂ ಕಚೇರಿ
Team Udayavani, Sep 29, 2022, 4:22 PM IST
ಕುಷ್ಟಗಿ: ಇಲ್ಲಿನ ಎಪಿಎಂಸಿ “ಎ’ ಬ್ಲಾಕ್ ರಸ್ತೆ ಅವ್ಯವಸ್ಥೆ ಕುರಿತು “ಉದಯವಾಣಿ’ಯಲ್ಲಿ ಪ್ರಕಟಗೊಂಡ ವರದಿಗೆ ಮುಖ್ಯಮಂತ್ರಿ ಅಧೀನ ಕಾರ್ಯದರ್ಶಿ ಸ್ಪಂದಿಸಿದ್ದು, ತಕ್ಷಣವೇ ಅಗತ್ಯ ಕ್ರಮಕ್ಕೆ ಮುಖ್ಯಮಂತ್ರಿ ಅಧೀನ ಕಾರ್ಯದರ್ಶಿ (ಆಡಳಿತ) ಸಿ.ವಿ. ಹರಿದಾಸನ್ ಆದೇಶಿಸಿದ್ದಾರೆ.
ಕಳೆದ ಸೆ. 14ರಂದು “ಉದಯವಾಣಿ’ಯಲ್ಲಿ “ಪ್ರವೇಶದ್ವಾರ ಸಿಸಿ, ನಿರ್ಗಮನ ರಸ್ತೆ ಕೆಸರು ಗದ್ದೆ’ ಶೀರ್ಷಿಕೆಯಲ್ಲಿ ಎಪಿಎಂಸಿ “ಎ’ ಬ್ಲಾಕ್ ರಸ್ತೆಯ ದುಸ್ಥಿತಿ ಬಗ್ಗೆ ವರದಿ ಪ್ರಕಟಗೊಂಡಿತ್ತು. ಮುಖ್ಯಮಂತ್ರಿ ಅಧೀನ ಕಾರ್ಯದರ್ಶಿಗಳು ಸಾರ್ವಜನಿಕ ಕುಂದು ಕೊರತೆ ಸಮಸ್ಯೆ ಹಿನ್ನೆಲೆಯಲ್ಲಿ ಈ ವರದಿ ಗಮನಿಸಿ ಎಪಿಎಂಸಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಸದರಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಟಿ. ನೀಲಪ್ಪ ಶೆಟ್ಟಿ ಅವರು, ನಿರಂತರ ಮಳೆಯಿಂದ “ಎ’ ಬ್ಲಾಕ್ ಹೊರ ಹೋಗುವ ರಸ್ತೆಯಲ್ಲಿ ವರ್ತಕರು ತಮ್ಮ ಅಂಗಡಿಗಳ ಮುಂದೆ ಮರಂ ಮಣ್ಣು ಹಾಕಿಕೊಂಡಿದ್ದರು. ಸದರಿ ಪತ್ರಿಕೆಯ ವರದಿ ಗಮನಿಸಿ ವರ್ತಕರು ಹಾಕಿಕೊಂಡಿರುವ ಹೆಚ್ಚುವರಿ ಮರಂ ಮಣ್ಣನ್ನು ಜೆಸಿಬಿಯಿಂದ ತೆರವುಗೊಳಿಸಿ ಮಳೆ ನೀರು ನಿಲ್ಲದಂತೆ ಸಮತಟ್ಟು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಮಿತಿ ಆರ್ಥಿಕ ಅನುಗುಣವಾಗಿ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.