ಬ್ಯಾಂಕ್ ಖಾತೆ ಸಂಖ್ಯೆ ಅದಲು-ಬದಲು
ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಕಿಸಾನ್ ಸಮಾನ್ ಯೋಜನೆ ಅರ್ಜಿದಾರರು
Team Udayavani, Jun 28, 2019, 3:28 PM IST
ಲಿಂಗಸುಗೂರು: ಸಹಾಯಕ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಲು ಆಗಮಿಸಿದ್ದ ಸಂತೆಕೆಲ್ಲೂರು ಗ್ರಾಮದ ರೈತರು.
ಲಿಂಗಸುಗೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗಾಗಿ ಅಗತ್ಯ ದಾಖಲೆಗಳನ್ನು ನೀಡಿದ್ದರೂ ತಮ್ಮ ಖಾತೆ ಸಂಖ್ಯೆ ಬದಲಿಗೆ ಬೇರೊಬ್ಬರ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿದ ಮಸ್ಕಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂತೆಕೆಲ್ಲೂರು ರೈತರು ಸಹಾಯಕ ಆಯುಕ್ತರಿಗೆ ಆಗ್ರಹಿಸಿದ್ದಾರೆ.
ಆಗಿದ್ದೇನು?: ಸಂತೆಕೆಲ್ಲೂರು ಗ್ರಾಮದ ರೈತ ಆದಮ್ಮ ದ್ಯಾಮಣ್ಣ, ಅಕ್ಕಮಹಾದೇವಿ ಅಮರಯ್ಯ, ಸಂಗಮ್ಮ ಮಲ್ಲಯ್ಯ, ಮಲ್ಲಿಕಾರ್ಜುನ ಸೇರಿ ಇತರರು ಈ ತೊಂದರೆ ಎದುರಿಸುತ್ತಿದ್ದಾರೆ. ಈ ಎಲ್ಲ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ನಕಲು ಪ್ರತಿ ಸೇರಿ ಇನ್ನಿತರ ಅಗತ್ಯ ದಾಖಲೆಗಳೊಂದಿಗೆ ಮಸ್ಕಿ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಲ್ಲಿನ ಕೃಷಿ ಅಧಿಕಾರಿಗಳು ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದರೂ ಬ್ಯಾಂಕ್ ಖಾತೆ ಕಾಲಂನಲ್ಲಿ ಬೇರೆಯವರ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ ಸ್ವೀಕೃತಿ ಪ್ರತಿ ನೀಡಿದ್ದಾರೆ. ಇದನ್ನು ಕಂಡ ರೈತರು ಈ ಬಗ್ಗೆ ಕೃಷಿ ಅಧಿಕಾರಿಗಳನ್ನು ವಿಚಾರಿಸಿದರೆ ಇದು ನಾನು ಮಾಡಿಲ್ಲ, ತಾಂತ್ರಿಕ ದೋಷವಾಗಿರಬಹುದು ಎಂದು ಹೇಳಿದ್ದಾರೆ. ಇದನ್ನು ತೆಗೆದು ನಮ್ಮ ಬ್ಯಾಂಕ್ ಖಾತೆ ಸಂಖ್ಯೆ ಹಾಕಿ ಎಂದು ಕೇಳಿದರೆ ಇದು ಬರಲ್ಲ, ನೀವು ಬ್ಯಾಂಕ್ನವರಿಗೆ ಕೇಳ್ರಿ, ಇಲ್ಲಾ ಪಿಡಿಒ ಅವರನ್ನು ಕೇಳ್ರಿ ಎಂದು ತಮ್ಮ ತಪ್ಪಿನಿಂದ ನುಣುಚಿಕೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತ ರೈತರು ಗುರುವಾರ ಪಟ್ಟಣದ ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆಗ್ರಹ: ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಉದ್ದೇಶ ಪೂರ್ವಕವಾಗಿ ನಮ್ಮ ಅರ್ಜಿಗಳಲ್ಲಿ ಬೇರೊಬ್ಬರ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿದ್ದಾರೆ. ಇಲ್ಲಿ ಆಗಿರುವ ದೋಷ ಸರಿಪಡಿಸುವಂತೆ ಪಿಡಿಒ, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ, ತಾಲೂಕು ಕೃಷಿ ಅಧಿಕಾರಿ ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದರೂ ಲೋಪ ಸರಿಪಡಿಸಿಲ್ಲ. ಹೀಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ. ಇಂತಹ ತಪ್ಪುಗಳು ಸಾಕಷ್ಟ ಅಗಿವೆ. ಕೂಡಲೇ ಕೃಷಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.