ರಥಸಪ್ತಮಿಯಂದು ಶ್ರೀರಂಗನಾಥಸ್ವಾಮಿ ರಥೋತ್ಸವ
Team Udayavani, Jan 27, 2023, 12:37 PM IST
ಶ್ರೀರಂಗಪಟ್ಟಣ: ರಥಸಪ್ತಮಿ ಅಂಗವಾಗಿ ಐತಿಹಾಸಿಕ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ಜ.28ರಂದು ವೈಭವಯುತವಾಗಿ ನಡೆಯಲಿದೆ.
ಶನಿವಾರ ಮುಂಜಾನೆ ಸೂರ್ಯಉದಯಕ್ಕೂ ಮುನ್ನ ದೇಗುಲದಲ್ಲಿನ ಸೂರ್ಯ ಮಂಡಲ, ಗಜಲಕ್ಷ್ಮೀ ರಥಗಳು ಅಲಂಕೃತಗೊಂಡು, ದೇವರ ಅನುಷ್ಠಾನದ ಬಳಿಕ ಪೂಜೆಗೆ ಒಳಪಟ್ಟುನಂತರ ಪಟ್ಟಣದ ರಾಜಬೀದಿ ಮೂಲಕ ಪಟ್ಟಣದ ಮುಖ್ಯಪೇಟೆಯಲ್ಲಿ ಭವ್ಯರಥಗಳು ಸಂಚರಿಸಲಿದೆ.
ಭಕ್ತರು ರಸ್ತೆಯ ಬದಿ ನಿಂತು ಹಣ್ಣು, ಕಾಯಿ ಹೊಡೆದು ರಥಕ್ಕೆ ಪೂಜೆಸಲ್ಲಿಸಲಿದ್ದಾರೆ. ಮಧ್ಯಾಹ್ನ ವೇದಮಂತ್ರ ಪಠಣೆಯೊಂದಿಗೆ ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ವಜ್ರ ವೈಡೂ ರ್ಯ ರತ್ನ ಖಚಿತ ಆಭರಣಗಳಿಂದ ಅಲಂಕೃತಗೊಂಡ ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಶ್ರೀರಂಗನ ಉತ್ಸವ ಮೂರ್ತಿಯನ್ನು ಅಲಂತಗೊಂಡು ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ದೇವಾಲಯದಲ್ಲಿ ಶ್ರೀರಂಗನಿಗೆ ವಿಶೇಷಪೂಜಾ ಅಲಂಕಾರಗಳ ಬಳಿಕ ಬ್ರಹ್ಮರಥೋತ್ಸವಕ್ಕೆ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ ಪೂಜೆಸಲ್ಲಿಸಿದ ಬಳಿಕ ದೇಗುಲದ ಸುತ್ತಲೂ 1 ಸುತ್ತು ರಥೋತ್ಸವದ ಮೆರವಣಿಗೆ ಮಾಡಲಾಗುತ್ತದೆ. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಮುಖ್ಯ ಅರ್ಚಕ ವಿಜಯ ಸಾರಥಿ ತಿಳಿಸಿದರು.