ರಾಜಕಾರಣಿಗಳಿಗಿಂತ ಕ್ರೀಡಾಪಟುಗಳು ಹೆಚ್ಚು ಜನಪ್ರಿಯ
Team Udayavani, Nov 2, 2019, 3:00 AM IST
ನಂಜನಗೂಡು: ಕ್ರೀಡೆಗೆ ಎಲ್ಲರನ್ನೂ ಒಗ್ಗುಡಿಸುವ ಶಕ್ತಿಯಿದ್ದು, ಧರ್ಮ, ಜಾತಿ ಮರೆತು ಅಂತಾರಾಷ್ಟ್ರೀಯ ಮನ್ನಣೆ ದೊರಕುವುದು ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಸಾಧ್ಯ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು. ನಂಜುಂಡೇಶ್ವರ ನ್ಪೋರ್ಟ್ಸ್ ಕ್ಲಬ್ ವತಿಯಿಂದ ನಗರದಲ್ಲಿ ಶುಕ್ರವಾರ ನಡೆದ ಮೈಸೂರು ಜಿಲ್ಲಾ ಮಟ್ಟದ ಕ್ರೀಡಾಕೂಟ ಸಮರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಎಲ್ಲರೂ ಸರಿ ಸಮಾನರು. ಇಲ್ಲಿ ಜಾತಿ ವರ್ಗದ ಭೇದವಿಲ್ಲ. ಪ್ರತಿಭೆಗಷ್ಟೆ ಇಲ್ಲಿ ಬೆಲೆ. ಆದರೆ ರಾಜಕೀಯದಲ್ಲಿ ಜಾತಿಯನ್ನು ನೋಡಿ ಗುರುತಿಸುತ್ತಾರೆ. ಇಂದು ರಾಜಕಾರಣಗಳಿಗಿಂತ ಕ್ರೀಡಾ ಪಟುಗಳು ಹೆಚ್ಚು ಜನಪ್ರಿಯರಾಗಿದ್ದಾರೆ. ಅದಕ್ಕೆ ಕಾರಣ ಈ ಕ್ಷೇತ್ರದಲ್ಲಿ ಜಾತಿ, ಧರ್ಮವನ್ನು ನೋಡುವುದಿಲ್ಲ. ಪ್ರತಿಭೆಗೆ ಮಾತ್ರ ಮನ್ನಣೆ ಇದೆ. ಕ್ರೀಡೆಯಲ್ಲೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಯು.ಎನ್. ಪದ್ಮನಾಭ್ರಾವ್, ಸಂಘದ ಅಧ್ಯಕ್ಷ ಕೆಂಪೇಗೌಡ, ಮೈಸೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ಕರವೇ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಬಿಜೆಪಿ ಮುಖಂಡ ಕುಂಬ್ರಳ್ಳಿ ಸುಬ್ಬಣ್ಣ, ಕೈಗಾರಿಕ ಒಕ್ಕೂಟದ ಅಧ್ಯಕ್ಷ ಎಂ.ಎಸ್.ರಾಮ್ಪ್ರಸಾದ್, ವೃತ್ತ ನಿರೀಕ್ಷಕರಾದ ರಾಜಶೇಖರ್ ಇತರರಿದ್ದರು.