Cauvery issue; ಮೈಸೂರಿನಲ್ಲಿ ಜನತಾ ದರ್ಶನಕ್ಕೂ ತಟ್ಟಿದ ಕಾವೇರಿ ಹೋರಾಟದ ಬಿಸಿ!
Team Udayavani, Sep 25, 2023, 2:53 PM IST
ಮೈಸೂರು: ಜಿಲ್ಲೆಯಲ್ಲಿ ಕಾವೇರಿ ನದಿ ನೀರು ವಿಚಾರದ ಆಕ್ರೋಶ ತೀವ್ರಗೊಂಡಿದ್ದು, ಮೈಸೂರಿನಲ್ಲಿ ಜನತಾದರ್ಶನಕ್ಕೂ ಕಾವೇರಿ ಹೋರಾಟದ ಬಿಸಿ ತಟ್ಟಿದೆ.
ಮೈಸೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪರಿಂದ ಜನತಾ ದರ್ಶನ ಆಯೋಜನೆ ಮಾಡಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ಜನತಾದರ್ಶನ ಆರಂಭವಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿತ್ತು.
ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯತಿ ಬಳಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಆರಂಭವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಕೆಎಸ್ಆರ್ಪಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ.
ಸಚಿವರಿಗೆ ಘೇರಾವ್: ಪ್ರತಿಭಟನಾ ನಿರತ ರೈತರು ಸಚಿವ ಮಹದೇವಪ್ಪಗೆ ಘೇರಾವ್ ಹಾಕಿದ ಘಟನೆ ನಡೆಯಿತು. ಸಚಿವ ಮಹದೇವಪ್ಪ ಕಾರನ್ನು ಅಡ್ಡಗಟ್ಟಿದ ರೈತರು ಆಕ್ರೋಶ ಹೊರಹಾಕಿದರು. ಈ ವೇಳೆ ಕಾರಿನಿಂದ ಕೆಳಗಿಳಿದು ಸಚಿವ ಮಹದೇವಪ್ಪ ಪ್ರತಿಭಟನಾನಿರತ ರೈತರ ಜೊತೆ ಮಾತುಕತೆ ನಡೆಸಿದರು.