ಪ್ರವಾಹ ಪೀಡಿತರಿಗೆ ದೇವೇಗೌಡರ ನೆರವು
Team Udayavani, Aug 20, 2018, 6:40 AM IST
ಮೈಸೂರು: ಕೇರಳ ಹಾಗೂ ಕೊಡಗು ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಸಂಕಷ್ಟಕ್ಕೀಡಾಗಿರುವವರ ಪರಿಹಾರ ಕಾರ್ಯಕ್ಕಾಗಿ ತಮ್ಮ ಒಂದು ತಿಂಗಳ ಸಂಸದರ ವೇತನವನ್ನು ನೀಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ 60 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಮಹಾ ಮಳೆ ನೋಡುತ್ತಿದ್ದೇನೆ. ಪ್ರವಾಹದಿಂದ ನಿರಾಶ್ರಿತರಾದವರಿಗೆ ಆಹಾರ, ಬಟ್ಟೆ ಸೇರಿ ಅವಶ್ಯಕ ಸಾಮಗ್ರಿಗಳ ಜತೆಗೆ ಹಣಕಾಸಿನ ನೆರವು ನೀಡಿದರೆ ಇನ್ನಷ್ಟು ಅನುಕೂಲವಾಗಲಿದೆ. ಇದಕ್ಕಾಗಿ ಕೇರಳಕ್ಕೆ ಒಂದು ತಿಂಗಳ ವೇತನ, ಕೊಡಗು ಜಿಲ್ಲೆಗೆ ಒಂದು ತಿಂಗಳ ವೇತನ ನೀಡುವುದಾಗಿ ಹೇಳಿದ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು ಉದಾರವಾಗಿ ನೆರವು ನೀಡಿದರೆ ಪರಿಹಾರ ಕಾರ್ಯಕ್ಕೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.