ಬೆಳೆಗಳಿಗೆ ಖಾತರಿ ಬೆಲೆ ನೀಡಿ..; ಮೋದಿ ಭೇಟಿಯ ವೇಳೆ ರೈತರಿಂದ ಪ್ರತಿಭಟನೆ
Team Udayavani, Jun 20, 2022, 4:12 PM IST
ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಲು ಕ್ಷಣಗಣನೆ ಆರಂಭವಾಗಿರುವಾಗಲೇ ರೈತಸಂಘಟನೆಗಳು ಕರ್ಮಯೋಗಿ ರೈತನ ಕಾಯಕ ದಿನವನ್ನು ವಿನೂತನವಾಗಿ ಆಚರಿಸಿ ಧಾನ್ಯ, ತರಕಾರಿ, ಬೆಲ್ಲ ಕಬ್ಬು ಖಾತರಿ ಬೆಲೆ ಕೊಡಿ ಎಂದು ಪ್ರಧಾನಮಂತ್ರಿಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದವು
ಕೃಷಿ ಉತ್ಪನ್ನಗಳ ಖಾತರಿ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆಯಲು ಕರ್ಮಯೋಗಿ ರೈತನ ಕಾಯಕ ದಿನ ಆಚರಿಸಿ, ರೈತರ ಉತ್ಪನ್ನ ಭತ್ತ, ರಾಗಿ, ಬೆಲ್ಲ, ತರಕಾರಿ ಹಣ್ಣುಗಳನ್ನು ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಮಾರುವ ಮೂಲಕ, ಪ್ರಧಾನಿಗಳೇ ರೈತರನ್ನು ರಕ್ಷಿಸಿ ಖಾತರಿ ಬೆಲೆ ನೀಡಿ ಎಂದು ಘೋಷಣೆ ಕೂಗಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರಧಾನಿಗಳು ಯೋಗ ದಿನ ಆಚರಿಸಲು ಮೈಸೂರಿಗೆ ಬರುತ್ತಿದ್ದಾರೆ. ನಾವು ಕರ್ಮಯೋಗಿ ರೈತನ ಕಾಯಕ ದಿನ ಆಚರಿಸುವ ಮೂಲಕ ಗಮನ ಸೆಳೆಯಲು ಕೃಷಿ ಉತ್ಪನ್ನಗಳ ಮಾರಾಟ ಮಾಡುತ್ತಿದ್ದೇವೆ. ಹಿಂದೆ ಮೈಸೂರಿನ ಚುನಾವಣೆ 2018ರಲ್ಲಿ ಸಂದರ್ಭದಲ್ಲಿ ಬಂದಾಗ 2022ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಭರವಸೆ ನೀಡಿದ ಪ್ರಧಾನಿ ಈಗ ರೈತರಿಗೆ, ಗೊಬ್ಬರ, ಬೀಜ, ಡೀಸೆಲ್ ಬೆಲೆ ಏರಿಕೆ ಮಾಡಿ ರೈತರಿಗೆ ಸಂಕಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.