ಬಿಜೆಪಿಯಲ್ಲಿ ಕಡೆಗಣನೆ: ಗೋ.ಮಧುಸೂದನ್
Team Udayavani, Mar 5, 2023, 5:00 AM IST
ಮೈಸೂರು: ಬಿಜೆಪಿ ಪಕ್ಷದಲ್ಲಿ ತಮ್ಮನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳದ ಕಾರಣ ಮೌನವಾಗಿದ್ದೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, 2016 ಹಾಗೂ 2022ರ ಪರಿಷತ್ ಚುನಾವಣೆಯಲ್ಲಿ ಪಕ್ಷ ತಮಗೆ ಟಿಕೆಟ್ ನಿರಾಕರಿಸಿತು. ಅನಂತರವೂ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ಬಳಸಿಕೊಳ್ಳುವ ಕುರಿತು ಪಕ್ಷ ಆಸಕ್ತಿ ತೋರಿಲ್ಲ. ತಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಆಗಬಾರದೆಂದು ಮಾಧ್ಯಮಗಳಿಂದ ದೂರ ಉಳಿದಿದ್ದೇನೆ ಎಂದರು.
ನಾನು ಇವತ್ತಿಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನು ಬೇರೆ ಯಾವುದೇ ಪಕ್ಷ ಸೇರಿಲ್ಲ, ಸೇರುವುದೂ ಇಲ್ಲ. ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆಪ್ತ ಸ್ನೇಹಿತರಾದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಪರಮೇಶ್ವರ್, ಆರ್.ವಿ.ದೇಶಪಾಂಡೆ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಕಾಂಗ್ರೆಸ್ಗೆ ಆಹ್ವಾನಿಸಿದರು. ಸಿದ್ಧಾಂತಗಳ ಆಧಾರದ ಮೇಲೆ ರಾಜಕಾರಣ ಮಾಡಿಕೊಂಡು ಬಂದಿರುವ ವ್ಯಕ್ತಿ ನಾನು. ಚುನಾವಣೆ ಅಥವಾ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವನಲ್ಲ ಎಂದು ಮಧುಸೂದನ್ ಹೇಳಿದರು.