ಚುನಾವಣೆ : ಆಣೆ ಪ್ರಮಾಣಕ್ಕಾಗಿ ಗೆಲುವಿನ ಸಂಭ್ರಮ ಮರೆತು ಬಸ್ ಹತ್ತಿದ ಗ್ರಾ.ಪಂ. ಸದಸ್ಯರು
Team Udayavani, Jun 28, 2022, 9:25 PM IST
ಪಿರಿಯಾಪಟ್ಟಣ : ಆಣೆ ಪ್ರಮಾಣಕ್ಕಾಗಿ ಗೆಲುವಿನ ಸಂಭ್ರಮ ಮರೆತು ಬಸ್ ಹತ್ತಿ ಹೊರಟ ಪ್ರಸಂಗ ನಡೆಯಿತು.
ತಾಲೂಕಿನ ಚಿಟ್ನೇನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಹುಮತ ವಿದ್ದರು ಜೆಡಿಎಸ್ ಪಕ್ಷ ಉಪಾಧ್ಯಕ್ಷ ಸ್ಥಾನ ಕಳೆದುಕೊಂಡ ಘಟನೆ ನಡೆದಿದ್ದು ಆಣೆ ಪ್ರಮಾಣಕ್ಕಾಗಿ ಗ್ರಾ.ಪಂ. ಸದಸ್ಯರನ್ನು ಕಪ್ಪಡಿ ಕ್ಷೇತ್ರಕ್ಕೆ ಕರೆದೊಯ್ಯಲಾಯಿತು.
ತಾಲೂಕಿನ ಚಿಟ್ಟೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಪಕ್ಷದ ಆಂತರಿಕ ಒಪ್ಪಂದದಂತೆ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಗಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಪಂಚಾಯಿತಿಯ ಒಟ್ಟು 20 ಸದಸ್ಯರ ಬಲದಲ್ಲಿ ಜೆಡಿಎಸ್ 13 ಬೆಂಬಲಿತ ಸದಸ್ಯರಿದ್ದರೆ ಕಾಂಗ್ರೆಸ್ನಲ್ಲಿ 7 ಮಂದಿ ಮಾತ್ರ ಇದ್ದರು. ಜೆಡಿಎಸ್ನಲ್ಲಿಯೆ ಅಧ್ಯಕ್ಷ ಸ್ಥಾನಕ್ಕೆ ಕಿತ್ತಾಟ ಆರಂಭವಾಗಿದ್ದು ಪ್ರಭಲ ಪಂಚಾಯಿತಿಯಾಗಿರುವ ಈ ಕ್ಷೇತ್ರಕ್ಕೆ ಖುದ್ದು ಶಾಸಕರೆ ಗ್ರಾ.ಪಂ.ಸದಸ್ಯರನ್ನು ಕರೆಸಿ ಸಮಾಧಾನ ಮಾಡಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರಾಗಿದ್ದ ಮಾಗಳಿ ಕುಮಾರ್, ಬೆಳತೂರು ದಿನೇಶ್ ಇಬ್ಬರು ನಾಮಪತ್ರ ಸಲ್ಲಿಸಿದ್ದು ಶಾಸಕರ ಸಂಧಾನದಿಂದ ದಿನೇಶ್ ತಮ್ಮ ನಾಮಪತ್ರ ವಾಪಸ್ಸ್ ಪಡೆದುಕೊಂಡು ಕುಮಾರ್ ಕಣದಲ್ಲಿ ಉಳಿದಿದ್ದರು. ಕಾಂಗ್ರೆಸ್ವತಿಯಿಂದ ಕಂದೇಗಾಲ ಮಹೇಶ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಮೀನಾಕ್ಷಿ ಮತ್ತು ಜೆಡಿಎಸ್ನ ದೀಪಾ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ : ಕೊರಟಗೆರೆ : ರಸ್ತೆಯುದ್ದಕ್ಕು ಗುಂಡಿ : ವಾಹನ ಸಂಚಾರಕ್ಕೆ ತೊಡಕು
ಅಧ್ಯಕ್ಷರ ಗೆಲುವು :
ನಂತರ ನಡೆದ ಚುನಾವಣೆಯಲ್ಲಿ ಕುಮಾರ್ 13 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಇವರ ಪ್ರತಿಸ್ಪರ್ಧಿ ಕೆ.ಪಿ.ಮಹೇಶ್ 7 ಮತಪಡೆದು ಸೋಲು ಅನುಭವಿಸಿದರು.
ಲಾಟರಿಯಲ್ಲಿ ಒದಗಿದ ಅದೃಷ್ಟ :
ಅಧ್ಯಕ್ಷ ಸ್ಥಾನಕ್ಕೆ ಬಂದ ಮತಗಳೆ ಉಪಾಧ್ಯಕ್ಷ ಸ್ಥಾನಕ್ಕು ಬರಲಿವೆ ಎಂಬ ಜೆಡಿಎಸ್ ಲೆಕ್ಕಾಚಾರ ತಲೆಕೆಳಗಾಗಿದ್ದು ಜೆಡಿಎಸ್ ಬೆಂಬಲಿತ ಸದಸ್ಯ ಮೀನಾಕ್ಷಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯೆ ದೀಪಾಗೆ ತಲಾ 10 ಮತಗಳು ಚಲಾವಣೆಯಾಗಿದ್ದು ತದ ನಂತರ ಲಾಟರಿ ನಡೆಸಲಾಯಿತು. ಲಾಟರಿಯಲ್ಲಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಲಿತ ದೀಪಾಸ್ವಾಮಿಗೌಡಗೆ ದೊರೆಯಿತು. ಬಹುಮತ ಇಲ್ಲದ್ದಿದ್ದರು ಕಾಂಗ್ರೆಸ್ಗೆ ಉಪಾಧ್ಯಕ್ಷ ಸ್ಥಾನ ದೊರೆತ ಕಾರಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಪಟ್ಟರು.
ಆಣೆ ಪ್ರಮಾಣ:
ಗೆಲುವಿನ ಸಂಭ್ರಮ ಆಚರಿಸಲು ಮುಂದಾಗಿದ್ದ ಜೆಡಿಎಸ್ಗೆ ತೀವ್ರ ಮುಖಭಂಗವಾಗಿದ್ದು 3 ಮತಗಳು ಅಡ್ಡಮತದಾನಗಳಾಗಿದ್ದವು ಗುಪ್ತ ಮತದಾನವಾಗಿದ್ದರಿಂದ ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದು ತಿಳಿಯದಾಗಿತ್ತು. ಅಲ್ಲದೆ ಜೆಡಿಎಸ್ನ 13 ಮಂದಿಯೂ ಒಟ್ಟಾಗಿಯೆ ಇದ್ದರೂ. ಇದರಿಂದ ಗೊಂದಲಕ್ಕೆ ಒಳಗಾಗ ಮುಖಂಡರು ಎಲ್ಲರನ್ನು ಕಪ್ಪಡಿ ಕ್ಷೇತ್ರದಲ್ಲಿ ಆಣೆ ಪ್ರಮಾಣಮಾಡಿಸಲು ವ್ಯಾನ್ನಲ್ಲಿ ಕರೆದೊಯ್ಯದರು.
ಚುನಾವಣಾಧಿಕಾರಿಯಾಗಿ ಪ್ರಸಾದ್ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕರ ರವಿ, ಹೆಮ್ಮಿಗೆ ಮಹೇಶ್, ಸ್ವಾಮಿಗೌಡ, ಜಗದೀಶ್, ಚಂದ್ರಶೇಖರ್, ರವಿ, ಮಹೇಂದ್ರ ಕುಮಾರ್, ಮಾಗಳಿ ಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.