ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ರಾಯಣ್ಣ ಇತಿಹಾಸ ಅರಿಯಿರಿ
Team Udayavani, Jan 27, 2019, 11:10 AM IST
ಹುಣಸೂರು: ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಸೋಲಿನ ರುಚಿ ತೋರಿಸಿದ ಗಂಡುಗಲಿ ಸಂಗೊಳ್ಳಿರಾಯಣ್ಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಬಣ್ಣಿಸಿದರು.
ನಗರದ ಕನಕ ಭವನದಲ್ಲಿ ತಾಲೂಕು ಸಂಗೊಳ್ಳಿರಾಯಣ್ಣ ಯುವ ಘರ್ಜನೆ ಸಮಿತಿ ವತಿಯಿಂದ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣರ 188ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತ್ಯಾಗ, ಬಲಿದಾನಕ್ಕೆ ಮತ್ತೂಂದು ಹೆಸರೇ ಸ್ವಾತಂತ್ರ್ಯ ಪ್ರೇಮಿ ಸಂಗೊಳ್ಳಿರಾಯಣ್ಣ, ದೇಶಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿದ ಹುತಾತ್ಮ. ಇಂತಹ ಮಹನೀಯರ ಬಗ್ಗೆ ಯುವ ಜನಾಂಗ ಅರಿತು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕುರುಬ ಸಮುದಾಯ ಭವನ ಕಾಮಗಾರಿ ಸ್ಥಗಿತಗೊಂಡಿದ್ದು, 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಶೀಘ್ರ ಪೂರ್ಣ ಗೊಳಿಸಲಾಗುವುದು ಎಂದರು.
ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿ, ಸಂಗೊಳ್ಳಿ ರಾಯಣ್ಣ ಒಬ್ಬ ದೇಶ ಪ್ರೇಮಿ, ಸ್ವಾತಂತ್ರ್ಯ ಸೇನಾನಿ, ಈತನ ಬದುಕು, ಹೋರಾಟ ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದು, ಈತ ದೇಶವನ್ನು ಪ್ರತಿನಿಧಿಸಿದ ಧೈರ್ಯವಂತ, ಇಂಥ ಹೋರಾಟಗಾರರನ್ನು ಒಂದು ಜಾತಿಗೆ ಸೀಮಿತ ಗೊಳಿಸುವುದು ತರವಲ್ಲ. ಇವರ ಹೋರಾಟದ ಬದುಕಿನ ಯಶೋಗಾಥೆ ಬಗ್ಗೆ ಎಲ್ಲರೂ ಅರಿಯಬೇಕೆಂದು ತಿಳಿಸಿದರು.
ಕಾಗಿನೆಲೆಯ ಕನಕ ಗುರುಪೀಠದ ಸರ್ವಾಂಗೀಣ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವನಾಥ್ ಮತ್ತು ಎಚ್.ಎಂ.ರೇವಣ್ಣ ಕೊಡುಗೆ ಅಪಾರ ಎಂದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಕುನ್ನೇಗೌಡ ಮಾತನಾಡಿ, ನಿರ್ಮಾಣ ಹಂತದಲ್ಲಿರುವ ಕನಕ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರು 1.5 ಕೋಟಿ ರೂ. ಅನುದಾನ ನೀಡಿದ್ದು, ಈ ಪೈಕಿ ಒಂದು ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಉಳಿದ 50 ಲಕ್ಷ ರೂ. ಅನುದಾನ ನೀಡಬೇಕೆಂದು ಕೋರಿದರು.
ಸಮಾರಂಭದಲ್ಲಿ ಸಂಗೊಳ್ಳಿರಾಯಣ್ಣ ಯುವ ಘರ್ಜನೆ ಅಧ್ಯಕ್ಷ ಶಿವಾನಂದ ಹಾಗೂ ಪದಾಧಿ ಕಾರಿಗಳು, ನಗರಸಭೆ ಸದಸ್ಯರಾದ ನರಸಯ್ಯ, ಶಿವರಾಜು, ಕಾಂಗ್ರೆಸ್ ಅಧ್ಯಕ್ಷ ಶಿರೇನಹಳ್ಳಿ ಬಸವರಾಜೇಗೌಡ, ಕುರುಬರ ಸಂಘದ ಗಣೇಶ ಕುಮಾರಸ್ವಾಮಿ, ಮಂಡ್ಯ ಮಹೇಶ್, ವಾಸೇಗೌಡ, ಚಂದ್ರೇಗೌಡ, ಪಾಪೇಗೌಡ, ಪ್ರಭಾಕರ್ಹೆಗಡೆ ಇತರರಿದ್ದರು.