ಹುಣಸೂರು: ಎಚ್1 ಎನ್1 ಗೆ 28 ರ ಹರೆಯದ ಗರ್ಭಿಣಿ ಬಲಿ
Team Udayavani, Sep 1, 2022, 2:53 PM IST
ಹುಣಸೂರು: ಎಚ್1 ಎನ್1 ಗೆ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಗರ್ಭಿಣಿಯೊಬ್ಬರು ಬಲಿಯಾಗಿದ್ದಾರೆ. ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿ ನಾಯ್ಕ ಅವರ ಪುತ್ರಿ ಛಾಯಾ(28) ಸಾವನ್ನಪ್ಪಿದವರು. ಪತಿ ಒಬ್ಬ ಮಗನನ್ನು ಅಗಲಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಗಂಡನ ಮನೆಯಲ್ಲಿದ್ದ ಅವರು ಹಬ್ಬದ ಹಿನ್ನೆಲೆಯಲ್ಲಿ ತವರು ಮನೆಗೆ ಬಂದಿದ್ದರು. ಜ್ವರ ಕಾಣಿಸಿಕೊಂಡು ಹನಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರದೊಂದಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಮಿಷನ್ ಆಸ್ಪತ್ರೆಗೆ ದಾಖಲಾಗಿದ್ದರು.
ಕೊರೊನಾ, ಚಿಕುನ್ ಗುನ್ಯಾ, ಎಚ್1 ಎನ್1 ಪರೀಕ್ಷೆಗೊಳಪಟ್ಟಿದ್ದರು. ಎಚ್1 ಎನ್1 ಕಾಯಿಲೆ ದೃಢ ಪಟ್ಟಿತ್ತು.ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದ್ದಾರೆ.
ಆರೋಗ್ಯಾಧಿಕಾರಿ ಸ್ಪಷ್ಟನೆ
ಹನಗೋಡು ಹೋಬಳಿಯ ಗೃಹಿಣಿಯಲ್ಲಿ ಎಚ್1 ಎನ್1 ದೃಢಪಟ್ಟಿತ್ತು. ಹನಗೋಡು ಆಸ್ಪತ್ರೆ ನಂತರದಲ್ಲಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು. ಇವರ ಕುಟುಂಬ ಹಾಗೂ ಪ್ರಾಥಮಿಕ ಸಂಪರ್ಕಹೊಂದಿದ್ದವರನ್ನು ಪರೀಕ್ಷೆಗೊಳಪಡಿಸಲು ಹನಗೋಡು ಆರೂಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜೋಗೆಂದ್ರನಾಥರಿಗೆ ಮಾಹಿತಿ ನೀಡಲಾಗಿದೆ. ತಾಲೂಕಿನಲ್ಲಿ ಬೇರೆ ಕಡೆ ಈ ಕಾಯಿಲೆ ಕಂಡು ಬಂದಿಲ್ಲ.
ಜ್ವರ ಕಾಣಿಸಿಕೊಂಡ ತಕ್ಷಣವೇ ಸಾರ್ವಜನಿಕರು ಸ್ವಯಂ ಚಿಕಿತ್ಸೆ ಪಡೆಯದೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಹಾಗೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಕೀರ್ತಿಕುಮಾರ್ ಮನವಿ ಮಾಡಿದ್ದಾರೆ.