ಹುಣಸೂರು: ಸಾಲಬಾಧೆಯಿಂದ ನೇಣಿಗೆ ಶರಣಾದ ರೈತ
Team Udayavani, Dec 21, 2022, 10:45 PM IST
ಹುಣಸೂರು: ಸಾಲಬಾಧೆಯಿಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ತಾಲೂಕಿನ ಹಿಂಡಗುಡ್ಲು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹನಗೋಡು ಹೋಬಳಿಯ ಹಿಂಡಗುಡ್ಲು ಗ್ರಾಮದ ಕೆಂಚೇಗೌಡ ಪುತ್ರ ಚಾಮುಂಡಿಗೌಡ(45) ಆತ್ಮಹತ್ಯೆ ಮಾಡಿಕೊಂಡ ರೈತ. ಇವರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ.
ಸಂಜೆ ವೇಳೆ ತಮ್ಮ ಜಮೀನಿನ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ರ ಜಮೀನಿನ ಹತ್ತಿರ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಅನುಮಾನದಿಂದ ಮರದ ಬಳಿ ನೋಡಿದಾಗ ತಮ್ಮ ತಂದೆ ನೇಣು ಬಿಗಿದು ಕೊಂಡಿರುವುದು ಪತ್ತೆಯಾಗಿದೆ. ತತ್ ಕ್ಷಣವೇ ಅಕ್ಕ ಪಕ್ಕದವರಿಗೆ ತಿಳಿಸಿದ್ದು,ಗ್ರಾಮಸ್ಥರು ಬಂದು ಚಾಮುಂಡಿಗೌಡನ್ನು ಕೆಳಕ್ಕಿಳಿಸುವಷ್ಟರಲ್ಲಾಗಲೇ ಸಾವನ್ನಪ್ಪಿದ್ದರು.
ಚಾಮುಂಡಿಗೌಡರು ತಮ್ಮ ಮನೆ ಕಟ್ಟಲು ಖಾಸಗಿ ಬ್ಯಾಂಕಿನಿಂದ ಮೂರು ಲಕ್ಷ ಹಾಗೂ ಹೈನುಗಾರಿಕೆಗೆ ಹನಗೋಡಿನ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಒಂದುವರೆ ಲಕ್ಷ ಸೇರಿದಂತೆ 4.5 ಲಕ್ಷ ಸಾಲ ಮಾಡಿದ್ದು .ಈ ವರ್ಷ ಅತಿವೃಷ್ಟಿಯಿಂದ ಬೆಳೆದ ಬೆಳೆಯು ಕೈ ಸೇರದೆ ಬಾರಿ ನಷ್ಟ ಉಂಟಾಗಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಹೋದರ ರಾಜೇಗೌಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.