Hunsur; ಪುತ್ರನ ಅಂಗಾಂಗ ದಾನ ಮಾಡಿ 6 ಮಂದಿಗೆ ಜೀವದಾನ ನೀಡಿ ಮಾನವೀಯತೆ
ಏಕೈಕ ಪುತ್ರನನ್ನ ಕಳೆದುಕೊಂಡ ದಂಪತಿ
Team Udayavani, Oct 19, 2023, 8:06 PM IST
ಹುಣಸೂರು: ಅಪಘಾತದಲ್ಲಿ ತೀವ್ರಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಪಿ.ಯು. ವಿದ್ಯಾರ್ಥಿಯೊರ್ವನ ಅಂಗಾಂಗಗಳನ್ನು ಪೋಷಕರು ದಾನ ಮಾಡಿ ಆರು ಮಂದಿಗೆ ಜೀವದಾನ ನೀಡುವ ಮೂಲಕ ಮಗನ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಶ್ಯಾನುಭೋಗನಹಳ್ಳಿ ಗ್ರಾಮದ ಪೋಷಕರಾದ ಸೋಮಶೇಖರ್-ಶ್ರೀಮತಿ ದಂಪತಿಗಳು ನೋವಿನಲ್ಲೂ ಮಾನವೀಯತೆ ಮೆರೆದವರು.
ದಂಪತಿಗಳ ಏಕೈಕ ಪುತ್ರ ಎಸ್.ಆದಿತ್ಯ ಬಿಳಿಕೆರೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ವಿದ್ಯಾರ್ಥಿ. ಈತ ಕಳೆದ ಅ.14 ರಂದು ಶ್ಯಾನುಬೋಗನಹಳ್ಳಿ-ರಾಮನಹಳ್ಳಿ ರಸ್ತೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಕೆ.ವಿ.ಸಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಹೆಚ್ಚಿನ ಚಿಕಿತ್ಸೆಗಾಗಿ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಮೆದುಳು ನಿಷ್ಕ್ರಿಯವಾಗಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟ ಮೇರೆಗೆ ಪೋಷಕರು ಸಂಕಷ್ಟದಲ್ಲೂ ದಾನಕ್ಕೆ ಮುಂದಾಗಿದ್ದರಿಂದ ಆರು ಮಂದಿಗೆ ಜೀವದಾನವಾಗಿದೆ. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಶುಕ್ರವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದೆಂದು ಕುಟುಂಬದವರು ತಿಳಿಸಿದ್ದಾರೆ.
ಮಾನವೀಯತೆ ಮೆರೆದ ದಂಪತಿಗಳ ಮಹತ್ಕಾರ್ಯವನ್ನು ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಹಾಗೂ ಗ್ರಾಮಸ್ಥರು ಪ್ರಶಂಸಿಸಿದ್ದಾರೆ.