ಪತ್ರಿಕಾರಂಗ ಸೇವಾ ಕ್ಷೇತ್ರವಾದರೆ ಬದಲಾವಣೆ ಸಾಧ್ಯ
Team Udayavani, Mar 3, 2019, 7:47 AM IST
ನಂಜನಗೂಡು: ಪತ್ರಿಕಾರಂಗ ವ್ಯಾಪಾರೀಕರಣದ ಮನೋಭಾವ ತೊರೆದು ಸೇವಾ ಕ್ಷೇತ್ರವಾಗಿ ಉಳಿದರೆ ಮಾತ್ರ ಸಮಾಜದ ಮುಖವಾಣಿಯಾಗಲು ಸಾಧ್ಯ. ಹಾಗಿದ್ದಾಗ ಮಾತ್ರ ಸಮಾಜದ ಬದಲಾವಣೆಯೂ ಸಹ ನಿಮ್ಮಿಂದ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತಾಲೂಕಿನ ಸುತ್ತೂರು ಕ್ಷೇತ್ರದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ 2 ದಿನಗಳ ಪತ್ರಕರ್ತರ ರಾಜ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಪತ್ರಿಕೆಗಳಿಗೆ ಜಾಹೀರಾತು ಮುಖ್ಯ.
ಆದರೆ, ಜಾಹೀರಾತಿಗಾಗಿ ವೃತ್ತಿ ಧರ್ಮ ಬಲಿಗೊಡಬೇಡಿ. ಪ್ರಜಾಪ್ರಭುತ್ವದ 4ನೇ ಅಂಗವಾದ ನಿಮ್ಮ ಮೇಲೆ ಅನುಮಾನದಿಂದ ಕಾಣುವಂತಾಗಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದರು. ಸಮಾರೋಪ ಭಾಷಣ ಮಾಡಿದ ಬಿ.ಎಸ್. ಯಡಿಯೂರಪ್ಪ, ಪತ್ರಿಕೋದ್ಯಮ ಇಂದು ಸತ್ಯವನ್ನು ಬಿಚ್ಚಿಡುವಲ್ಲಿ ವಿಫಲವಾಗಿದೆ. ಜನತೆ ನಿಮ್ಮ ಮೇಲಿಟ್ಟರುವ ವಿಶ್ವಾಸಕ್ಕೆ ಭಂಗ ಬಾರದಂತೆ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ. ವಿ. ಮಲ್ಲಿಕಾರ್ಜುನಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಮಹೇಂದ್ರ, ಕಾರ್ಯದರ್ಶಿ ಪರಮಾನಂದ ಪಾಂಡೆ, ಶಾಸಕ ನಾಗೇಂದ್ರ, ಮತ್ತಿಕರೆ ಜಯಂರಾಂ ಇತರರಿದ್ದರು.