15 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ತೊರಿಸಿದವರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್: ವಿಶ್ವನಾಥ್
Team Udayavani, Nov 18, 2021, 1:25 PM IST
ಮೈಸೂರು: ಕಾಂಗ್ರೆಸ್ ನಲ್ಲಿ ವಿಧಾನ ಪರಿಷತ್ ಟಿಕೆಟ್ ಪಡೆಯಲು 15 ಕೋಟಿ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೊಸ ಬಾಂಬ್ ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಬೇಕಾದರೆ ಒಂದು ಲಕ್ಷ ನಾನ್ ರಿಟರ್ನೇಬಲ್ ಫಂಡ್ ಕೊಡಬೇಕು. 15 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ತೊರಿಸಿದವರಿಗೆ ಮಾತ್ರ ಟಿಕೆಟ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಿಕೆಟ್ ಬಯಸುವವರಿಗೆ ಹೇಳಿದ್ದಾರೆ. ಹೀಗಾದರೆ ಸಾಮಾಜಿಕ ನ್ಯಾಯ ಎಲ್ಲಿ ಸಿಗುತ್ತದೆ ಹೇಳಿ. ಕಾಂಗ್ರೆಸ್ ನಲ್ಲೂ ಕೂಡ ಈಗ ಸಾಮಾಜಿಕ ನ್ಯಾಯ ದೂರವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಎಂಟು ಉಪಚುನಾವಣೆ ನಡೆದಿದೆ. ಆ ಸಂದರ್ಭದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಲ್ಲ. ಈಗ ಚುನಾವಣೆ ಹತ್ತಿರ ಬಂದಿದೆಯೆಂದು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಿದ್ದಾರೆ. ಯುವಕರನ್ನು ಚುನಾವಣೆ ನಿಲ್ಲಿಸಿ. ಅದನ್ನು ಬಿಟ್ಟು ದುಡ್ಡು ತೆಗೆದುಕೊಂಡು ಬಾ ಅಂತ ಹೇಳುವುದಿಲ್ಲ ಎಂದು ವಿಶ್ವನಾಥ್ ಹೇಳಿದರು.
ಇದನ್ನೂ ಓದಿ:ಬಿಟ್ ಕಾಯಿನ್ ಕಂಪನಿಗೆ ಕಾಂಗ್ರೆಸ್ ನದ್ದೇ ನಟನೆ, ನಿರ್ದೇಶನ,ನಿರ್ಮಾಣ : ಆರ್.ಅಶೋಕ್
ಖರ್ಗೆ-ಪರಮೇಶ್ವರ್ ಸಿಎಂ ಆಗಬಾರದೆ?: ಸಿದ್ದರಾಮಯ್ಯನವರು ದಲಿತ ಮುಖ್ಯಮಂತ್ರಿಗೆ ನನ್ನ ಬೆಂಬಲವೆಂದು ಹೇಳುತ್ತಾರೆ. ಮತ್ತೊಂದೆಡೆ ನಾನೆ ದಲಿತ ಎಂದೂ ಹೇಳುತ್ತಾರೆ. ನಾನೇ ಮುಂದಿನ ಮುಖ್ಯಮಂತ್ರಿ ಅಂತ ಇದರರ್ಥ. ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಇಲ್ಲವೇ? ಇವರುಗಳು ಮುಖ್ಯಮಂತ್ರಿಯಾಗಬಾರದೆ ಎಂದು ಪ್ರಶ್ನಿಸಿದರು.
ಎಲ್ಲಿಂದ ಸಾಕ್ಷಿ ತರ್ತೀರಿ ಸ್ವಾಮಿ?: “ಹದಿನೈದು ದಿನ ಕಾಯಿರಿ ನಾನು ಸಾಕ್ಷಿ ತರುತ್ತೇನ” ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಸಾಕ್ಷಿಗಳನ್ನು ಎಲ್ಲಿಂದ ತರುತ್ತಾರೆ? ಬಿಟ್ ಕಾಯಿನ್ ಪ್ರಕರಣ ಯಾರಿಗೂ ಗೊತ್ತಿಲ್ಲದೆ ಮಾಯಾವಿ ತರ ಹೋಗುತ್ತಿದೆ. 2016 ರಲ್ಲಿ ಯುಬಿ ಸಿಟಿಯಲ್ಲಿ ಬಿಟ್ ಕಾಯಿನ್ ವಿಚಾರದ ಬಗ್ಗೆ ಗಲಾಟೆ ಆಗಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನಿಂದನೂ ಈ ಪ್ರಕರಣವಿದೆ. ಡಿ ಲಿಮಿಟೇಷನ್ ವಿಚಾರಲ್ಲಿ ಹೊಸ ಭಾಷ್ಯ ಬರೆದವರು ಸಿದ್ದರಾಮಯ್ಯನವರೆ ಹಿಟ್ ಅಂಡ್ ರನ್ ಮಾಡ್ತಿದ್ದಾರೆ ಎಂದರು.