ಪ್ರತಾಪಸಿಂಹ ಹೇಳಿಕೆ; ಹುಣಸೂರು ವಕೀಲರಿಂದ ಖಂಡನಾ ನಿರ್ಣಯ: ಮಾನನಷ್ಟ ಕೇಸ್
ಚುನಾವಣಾ ಪ್ರಚಾರಕ್ಕಾಗಮಿಸಿದ ಮಾಜಿ ಸಚಿವ ಸುರೇಶ್ಕುಮಾರ್ ಗೂ ಘೇರಾವ್
Team Udayavani, Jun 6, 2022, 9:50 PM IST
ಹುಣಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ತೆಗಳುವ ಭರದಲ್ಲಿ ತಾಲೂಕು ಕೋರ್ಟ್ ಗ ಳಲ್ಲಿ ವೃತ್ತಿ ಮಾಡುವ ವಕೀಲರ ವೃತ್ತಿ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಾರೆಂದು ಆರೋಪಿಸಿದ ಹುಣಸೂರು ವಕೀಲರು ಕಲಾಪದಿಂದ ಹೊರಗುಳಿದು ಪ್ರತಿಭಟಿಸಿದರು.
ವಕೀಲರ ಸಂಘದ ಅಧ್ಯಕ್ಷ ಯೋಗಣ್ಣೇಗೌಡರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ ಸಂಸದ ಪ್ರತಾಪಸಿಂಹ ಅವರ ಹೇಳಿಕೆಯಿಂದ ವಕೀಲರ ಸಮುದಾಯಕ್ಕೆ ಅತಿಯಾದ ಮುಜುಗರ ಉಂಟಾಗುವಂತೆ ಮಾಡಿರುವುದನ್ನು ವಕೀಲರು ಖಂಡಿಸಿ, ಖಂಡನಾ ನಿರ್ಣಯ ಕೈಗೊಂಡರು. ಅಲ್ಲದೇ ಸಂಸದರ ಹೇಳಿಕೆ ವಿರುದ್ದ ತಾಲೂಕು ನ್ಯಾಯಾಲಯಗಳಲ್ಲಿ ಮಾನನಷ್ಟ ಪ್ರಕರಣದ ಅಡಿಯಲ್ಲಿ ಖಾಸಗಿ ದೂರು ದಾಖಲು ಮಾಡಲು ನಿರ್ಣಯ ಕೈಗೊಂಡರು.
ಸುರೇಶ್ಕುಮಾರ್ಗೆ ಘೇರಾವ್
ಸಭೆ ವೇಳೆಯೇ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಪರ ಮತ ಯಾಚೆನೆಗೆಂದು ಆಗಮಿಸಿದ ಮಾಜಿ ಸಚಿವ ಸುರೇಶ್ ಕುಮಾರ್ ಅವರಿಗೆ ವಕೀಲರು ಸಾಮೂಹಿಕವಾಗಿ ಘೆರಾವ್ ಹಾಕಿ ಸಂಸದರ ವಿರುದ್ದ ಅಸಮಾಧಾನ ಹೊರಹಾಕಿದರು.ಮೈಸೂರು ಮತ್ತು ಬೆಂಗಳೂರು ಬಾರ್ ಕೌನ್ಸಿಲ್ನಲ್ಲಿ ತಾವು ಈ ಬಗ್ಗೆ ಹೇಳಿಕೆ ನೀಡಿರುವುದಾಗಿ ಮಾಜಿ ಸಚಿವರು ಹೇಳಿದರೂ ಸಹ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಘಟನೆಯಿಂದ ಇರಿಸು ಮುರಿಸುಗೊಂಡ ಸುರೇಶ್ಕುಮಾರ್ ಬೇಸರದಲ್ಲಿಯೆ ಹೊರ ನಡೆದರು. ಕೊನೆಗೆ ವಕೀಲರ ಭವನದ ಹೊರಗೆ ಪ್ರಚಾರ ನಡೆಸಿ ತೆರಳಿದರು. ಈ ವೇಳೆ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಹಲವಾರು ವಕೀಲರು ಭಾಗವಹಿಸಿದ್ದರು.