ಪ್ರತಿ ವರ್ಷ ತಲಕಾಡು ಗಂಗರ ಉತ್ಸವ ಆಯೋಜಿಸುತ್ತೇವೆ : ಸಚಿವ ಸಿ.ಪಿ.ಯೋಗೇಶ್ವರ್
Team Udayavani, Jul 19, 2021, 6:45 PM IST
ತಲಕಾಡು : ಇನ್ನುಮುಂದೆ ಪ್ರತಿ ವರ್ಷ ದಸರಾ ಹಬ್ಬದಲ್ಲಿ ತಲಕಾಡು ಗಂಗರ ಉತ್ಸವ ಆಯೋಜಿಸುತ್ತೇವೆ. ಇದರಿಂದ ತಲಕಾಡಿನ ಅಭಿವೃದ್ಧಿ ಸಾಧ್ಯ. ಈ ವಿವಿಧ ಇಲಾಖೆಗಳ ಜೊತೆ ಚರ್ಚೆ ಮಾಡಿ ರೂಪುರೇಷೆ ಮಾಡುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ಟಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ತಲಕಾಡು ಗಂಗರ ಉತ್ಸವ ನಡೆಸಲು ತಲಕಾಡು ಅಭಿವೃದ್ಧಿ ಸಮಿತಿ ರಚಿಸುತ್ತೇವೆ. ತಲಕಾಡು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದ್ದು ಇನ್ನೂ ಹೆಚ್ಚಿನ ಜನರಿಗೆ ಪರಿಚಯವಾಗಬೇಕಿದೆ. ಇಂತಹ ಸ್ಥಳದ ಅಭಿವೃದ್ಧಿ ಅವಶ್ಯಕತೆ ಇದೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಈ ಕೊರತೆಯನ್ನು ಸರಿಪಡಿಸಲು ಉತ್ಸವಗಳ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಪ್ರವಾಸೋದ್ಯಮ ಕಾರಣಕ್ಕೆ ತಲಕಾಡನ್ನ ಇನ್ನಷ್ಟು ಅಭಿವೃದ್ಧಿ ಪಡಿಸಬೇಕಿದೆ. ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಇಲ್ಲಿ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದೆ. ಮೈಸೂರಿಗೆ ಬರುವ ಪ್ರವಾಸಿಗರು ಇಲ್ಲಿಗೂ ಸಹ ಬರುವಂತಾಗಬೇಕು. ಧಾರ್ಮಿಕ ಕೇಂದ್ರವಾಗಿ ಮಾತ್ರ ಅಲ್ಲದೇ ಪ್ರವಾಸಿ ತಾಣವಾಗಿ ಸಹ ಅಭಿವೃದ್ಧಿ ಆಗಬೇಕಿದೆ. ಮೈಸೂರು ಸರ್ಕ್ಯೂಟ್ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ ಎಂದರು.
ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣವಿದ್ದರೂ ಶಾಲಾ ಮಕ್ಕಳಿಗೆ ಮೂಲಸೌಕರ್ಯ ಇಲ್ಲ. ನಮ್ಮ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಭೆ ನಡೆಸಿ, ಮೈಸೂರು ಸೇರಿದಂತೆ ರಾಜ್ಯದ ಹತ್ತು ಕಡೆಗಳಲ್ಲಿ ಶಾಲಾ ಮಕ್ಕಳಿಗೆ ಮೂಲ ಸೌಕರ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಸರ್ಕಾರದಿಂದ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸುತ್ತೇವೆ.ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ.ವಿವಿಧ ಇಲಾಖೆಗಳ ಜೊತೆ ಚರ್ಚೆ ಮಾಡಿ ಅಂತಿಮ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದರು.