ಎಚ್ಚೆತ್ತುಕೊಂಡು ಕೆಲಸ ಮಾಡದಿದ್ರೆ ನೀವು ಉಳಿಯಲ್ಲ
Team Udayavani, Oct 22, 2019, 3:00 AM IST
ಮೈಸೂರು: ಹೊಸ ಬಡಾವಣೆಗಳನ್ನೂ ರಚಿಸುತ್ತಿಲ್ಲ, ನಿವೇಶನವನ್ನೂ ಕೊಡುತ್ತಿಲ್ಲ. ಇಷ್ಟೊಂದು ಜನ ಎಂಜಿನಿಯರ್ಗಳಿದ್ದರೂ ಮಾಡುವ ಕಾಮಗಾರಿಗಳೂ ಗುಣಮಟ್ಟದಿಂದ ಇರಲ್ಲ, ನೀವು ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ ಆಗುತ್ತೆ. ಸತ್ತು ಹೋಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು (ಮೂಡಾ)ಮುಚ್ಚಬೇಕಾಗುತ್ತದೆ ಎಂದು ಶಾಸಕ ಜಿ.ಟಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಸಭಾಂಗಣದಲ್ಲಿ ನಡೆದ ಚಾಮುಂಡೇಶ್ವರಿ ಮತ್ತು ವರುಣಾ ವಿಧಾನಸಭಾ ಕ್ಷೇತ್ರಗಳ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಮುಡಾದ ಒಬ್ಬೊಬ್ಬ ಎಇಇಗಳ ವ್ಯಾಪ್ತಿಗೆ 2 ರಿಂದ 5 ಕೋಟಿ ರೂ. ವೆಚ್ಚದ 6-8 ಕಾಮಗಾರಿಗಳಷ್ಟೇ ಇರುತ್ತೆ, ನಿಮ್ಮ ಕೈಕೆಳಗೆ ಇಬ್ಬರು ಎಇಗಳೂ ಇರುತ್ತಾರೆ ಆದರೂ ಕಾಮಗಾರಿಗಳ ಮೇಲ್ವಿಚಾರಣೆ ಮಾಡಿ ಗುಣಮಟ್ಟ ಕಾಯ್ದುಕೊಳ್ಳಲಿಲ್ಲ ಎಂದರೆ ನೀವೆಲ್ಲಾ ಏನು ಮಾಡುತ್ತೀರಿ ಎಂದು ಮುಡಾ ಎಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡರು.
ಭೂಸ್ವಾಧೀನ ಮಾಡುವುದು, ಖಾಸಗಿ ಬಡಾವಣೆಗಳಿಗೆ ಅನುಮೋದನೆ ಕೊಡುವುದಷ್ಟೇ ಮುಡಾ ಕೆಲಸವಾ?, ಮುಡಾ ಕಾಮಗಾರಿಗಳಾವುದು ಗುಣಮಟ್ಟದಿಂದ ಕೂಡಿರಲ್ಲ, ನೀವು ರಸ್ತೆಗೆ ಟಾರ್ ಹಾಕಿಸಿದರೆ ಒಂದು ವರ್ಷ ಕೂಡ ಇರಲ್ಲ, ಒಂದು ತಿಂಗಳಿಗೆ ಕಿತ್ತೋಗ್ತಿದೆ. ಮುಡಾದಲ್ಲಿ ಇಷ್ಟೊಂದು ಜನ ಎಂಜಿನಿಯರ್ಗಳಿದ್ದೀರಿ, ಮಾಡೋ ಕೆಲಸವನ್ನಾದರೂ ಗುಣಮಟ್ಟದಿಂದ ಮಾಡಿಸಿ, ಬೆಳಗ್ಗೆ ಎದ್ದು ಕೆಲಸದ ಹತ್ತಿರ ಹೋಗಿ ಅದೇ ವಾಕ್, ವ್ಯಾಯಮ ಆಗಲಿ ಎಂದು ಸಲಹೆ ನೀಡಿದರು.
ಗೂರೂರು ಗ್ರಾಮದಲ್ಲಿ ಒಳಚರಂಡಿಗೆ ಮಣ್ಣು ತೆಗೆದು ಅದನ್ನು ಮತ್ತೆ ಹಾಗೇ ಬಿಟ್ಟರೆ ರಸ್ತೆಯಲ್ಲಿ ಜನ ಓಡಾಡುವುದು ಹೇಗೆ? ಅಲ್ಲಿನ ಜನ ದಿನಾ ನನಗೆ ದೂರು ಹೇಳುತ್ತಾರೆ, ಒಬ್ಬ ಎಇಇಗೆ ವರ್ಷಕ್ಕೆ 8 ಕಾಮಗಾರಿಯನ್ನು ನಿಂತು ಮಾಡಿಸುವುದು ಕಷ್ಟವಾ ಎಂದು ಮುಡಾ ಎಇಇ ದಿನೇಶ್ರನ್ನು ತರಾಟೆಗೆ ತೆಗೆದುಕೊಂಡರು.
ಮುಡಾ ವಲಯ 3ರಲ್ಲಿ 2 ಕೋಟಿ ವೆಚ್ಚದ ಕಾಮಗಾರಿಗೆ 3 ಜನ ಎಂಜಿನಿಯರ್ಗಳಿದ್ದೀರಿ, 8 ಕೆಲಸಗಳಷ್ಟೇ ಇದೆ. ಅದಾದ ಮೇಲೆ ನಿಮಗೆ ಕೆಲಸವಿಲ್ಲ. ಆದರೂ ನಡೆಯುತ್ತಿರುವ ಕಾಮಗಾರಿಗಳ ಮೇಲ್ವಿಚಾರಣೆ ಮಾಡಲ್ಲ. ಬೆಳವಾಡಿಯಲ್ಲಿ ಸೆಫ್ಟಿಕ್ ಟ್ಯಾಂಕ್ ಮಾಡದೆ ಯುಜಿಡಿ ನೀರು ಕೆರೆಗೆ ಸೇರುತ್ತಿದೆ. ಟ್ಯಾಂಕ್ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಕೆಲಸ ಆಗಿದೆ ಅನ್ನುತ್ತೀರಾ, ಭಾನುವಾರದ ನಂತರ ಬೆಳವಾಡಿಯ ಒಳ ಚರಂಡಿ ಸಮಸ್ಯೆ ಇದ್ದರೆ ನೀವು ಉಳಿಯಲ್ಲ ಎಂದು ವಲಯ-3ರ ಎಇಇಗೆ ಎಚ್ಚರಿಕೆ ನೀಡಿದರು.
ಮುಡಾ ವ್ಯಾಪ್ತಿಗೆ 25 ಉದ್ಯಾನ ಬರುತ್ತೆ, ಈಗ ಮಳೆ ಬೀಳುತ್ತಿರುವುದರಿಂದ ತಲಾ 25 ಸಾವಿರ ಖರ್ಚು ಮಾಡಿದರೆ ಉದ್ಯಾನಗಳಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳನ್ನು ಕಿತ್ತು ಹಾಕಿಸಬಹುದು. ಆ ಕೆಲಸ ಮಾಡಿ, ಉದ್ಯಾನಗಳ ನಿರ್ವಹಣೆ ಮಾಡಿ ಎಂದು ಸೂಚಿಸಿದರು. ಜಿಪಂ ಸದಸ್ಯೆ ಚಂದ್ರಿಕಾ ಸುರೇಶ್ ಮಾತನಾಡಿ, ವಿಜಯ ನಗರ 3ನೇ ಹಂತದ ಸಿ ಬ್ಲಾಕ್ನ ರಸ್ತೆಗೆ ಟಾರ್ ಹಾಕಿ 1 ತಿಂಗಳಾಗಿದೆ. ಆಗಲೇ ಕಿತ್ತು ಹೋಗಿದೆ. ಒಳಚರಂಡಿ ಮ್ಯಾನ್ಹೋಲ್ ಮಾಡಿಸಿ 3 ತಿಂಗಳಾಗಿದೆ. ಆಗಲೇ ಒಡೆದು ಹೋಗಿದೆ ಎಂದು ಅಲ್ಲಿನ ಛಾಯಾಚಿತ್ರ ಪ್ರದರ್ಶಿಸಿ ಶಾಸಕರ ಗಮನ ಸೆಳೆದರು.
ಕಳಪೆ ಕಾಮಗಾರಿ: ಈ ಬಗ್ಗೆ ಮುಡಾ ಎಂಜಿನಿಯರ್ಗಳ ಉತ್ತರದಿಂದ ತೃಪ್ತರಾಗದ ಶಾಸಕ ಜಿಟಿಡಿ, ಮಾಡುವುದಾದರೆ ಗುಣಮಟ್ಟದ ಕೆಲಸ ಮಾಡಿಸಿ, ನೀವು ಮಾಡದಿದ್ದರೆ ಕತ್ತೆ ಬಾಲ, ಕಾಮಗಾರಿ ಮಾಡಿದ ಮೇಲೆ ಆ ಗುತ್ತಿಗೆದಾರನಿಂದ ಒಂದು ವರ್ಷ ಅದರ ನಿರ್ವಹಣೆ ಮಾಡಿಸಿ, ಮುಡಾ ಇತಿಹಾಸದಲ್ಲಿ ಒಬ್ಬನೇ ಒಬ್ಬ ಗುತ್ತಿಗೆದಾರನಿಂದ ಕಾಮಗಾರಿ ನಿರ್ವಹಣೆ ಮಾಡಿಸಿದ ಉದಾಹಣೆ ಇಲ್ಲ. ಕೆಲಸ ಮಾಡದ ಎಇ, ಜೆಇಗಳನ್ನು ಅಮಾನತ್ತು ಮಾಡಿ ಬಿಸಾಕಿ, ಜಿಲ್ಲಾ ಮಂತ್ರಿಯನ್ನು ಕರೆತಂದು ಸ್ಥಳ ಪರಿಶೀಲನೆ ಮಾಡಿಸುತ್ತೇನೆ. ಕಳಪೆ ಕಾಮಗಾರಿಯಾಗಿದ್ದರೆ ನೀವು ಉಳಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಸರ್ವೆ ಮಾಡಿಸಿ: ಚರ್ಚ್ನವರಿಗೋಸ್ಕರ ನಾಲೆಯನ್ನೇ ಮುಚ್ಚಿಸುತ್ತೀರಾ? ಯಾರು ಎಷ್ಟೇ ದೊಡ್ಡವರಾಗಿರಲಿ ನಾಲೆ ಒತ್ತುವರಿಯನ್ನು ತೆರವುಗೊಳಿಸಿ, ಸರ್ವೆ ಮಾಡಿಸಿ ಎಂದು ಸೂಚಿಸಿದರು. ಬೋಗಾದಿಯ ಚರ್ಚ್ ಹಿಂದೆ ಇರುವ ಪೂರ್ಣಯ್ಯ ನಾಲೆಯನ್ನೇ ಮುಚ್ಚಿ ರಸ್ತೆ ಮಾಡಲಾಗಿದೆ, ಇದಕ್ಕೆ ಹೇಗೆ ಅವಕಾಶ ಕೊಟ್ಟಿರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಡಾ ಎಂಜಿನಿಯರ್, ಭಾನುವಾರ ಚರ್ಚ್ಗೆ ಹೋಗಲು ದಾರಿ ಬೇಕು ಎಂದು ಕೇಳಿದ್ದರಿಂದ ಆಯುಕ್ತರ ಮೌಖೀಕ ಸೂಚನೆ ಮೇರೆಗೆ ನಾಲೆ ಮುಚ್ಚಿ ತಾತ್ಕಾಲಿಕವಾಗಿ ರಸ್ತೆ ಮಾಡಿಕೊಟ್ಟಿದ್ದೇವೆ, ತೆರವುಗೊಳಿಸುತ್ತೇವೆ ಎಂದರು.
ಕುತ್ತಿಗೆಪಟ್ಟಿ ಹಿಡಿದು ಹೊಡೀರಿ: ಕೆಡಿಪಿ ಸಭೆ ಮಧ್ಯೆಯೇ ಆಗಮಿಸಿದ ಸಿಲಿಕಾನ್ ವ್ಯಾಲಿ ಬಡಾವಣೆಯ ಕೆಲ ನಿವಾಸಿಗಳು, ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸದಿರುವ ಬಗ್ಗೆ ದೂರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ, ನೀರು, ಬೀದಿ ದೀಪ, ಒಳಚರಂಡಿ ವ್ಯವಸ್ಥೆ ಕಲ್ಪಿಸದಿದ್ದರೆ ಅವರು ಹೇಗೆ ಬದುಕಬೇಕು? ಗ್ರಾಮ ಪಂಚಾಯ್ತಿಯವರು ನಕ್ಷೆ ಅನುಮೋದನೆ ಮಾಡಿಕೊಟ್ಟು ಮೂಲಸೌಕರ್ಯ ಕಲ್ಪಿಸುವುದಿಲ್ಲ ಎಂದರೆ ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡವರು. ಬಡಾವಣೆ ಮಾಡಿದವನ ಕುತ್ತಿಗೆಪಟ್ಟಿ ಹಿಡಿದು ಹೊಡೆದು ಕೇಳುವುದನ್ನು ಬಿಟ್ಟು ನಮ್ಮ ಹತ್ತಿರ ಬರುತ್ತೀರಾ ಎಂದು ಆಕ್ರೋಶ ಹೊರಹಾಕಿದರು.
ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಏನು ಬರುತ್ತೋ ಗೊತ್ತಿಲ್ಲ. ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವಿಷಯದಲ್ಲಿ ನಾವು ತಟಸ್ಥವಾಗಿರುತ್ತೇವೆ.
-ಜಿ.ಟಿ.ದೇವೇಗೌಡ, ಶಾಸಕ