ಶಾಸಕರ ನಿವಾಸಕ್ಕೆ ಅನ್ನದಾತರ ದಂಡು
Team Udayavani, Jan 17, 2022, 12:53 PM IST
ಸಿಂಧನೂರು: ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಿತಿ ನಿರ್ಬಂಧ ತೆರವುಗೊಳಿಸಿ ಕೃಷಿ ಉತ್ಪನ್ನವನ್ನು ಖರೀದಿಸುವಂತೆ ರಾಜ್ಯ ಸರಕಾರದ ಗಮನ ಸೆಳೆಯಲು ಬೆಂಗಳೂರಿಗೆ ತೆರೆಳುತ್ತಿರುವೆ. ಈ ಹೋರಾಟದಲ್ಲಿ ಯಶಸ್ಸು ಲಭಿಸಲಿದ್ದು, ಅನಿವಾರ್ಯವಾದರೆ ಹೋರಾಟಕ್ಕೆ ಇಳಿಯುತ್ತೇನೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಭಾನುವಾರ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿ, ಅವರು ಈ ಭರವಸೆ ನೀಡಿದರು. ಈ ಮೊದಲು ರಾಜ್ಯ ಸರಕಾರದ ಮನವೊಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇನೆ. ನಾನು ಮತ್ತು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದಾಗ, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಖರೀದಿಗೆ ಮಿತಿ ತೆರವುಗೊಳಿಸುವ ವಿಶ್ವಾಸ ಇದೆ. ಕೋವಿಡ್ ಮತ್ತು ಲಾಕ್ಡೌನ್ ಹಿನ್ನೆಲೆಯಲ್ಲಿ ಮತ್ತೆ ಮುಖ್ಯಮಂತ್ರಿಗಳ ಭೇಟಿ ಸಾಧ್ಯವಾಗಿರಲಿಲ್ಲ. ನಾಳೆಯೇ ಬೆಂಗಳೂರಿಗೆ ಹೊರಡುತ್ತಿದ್ದು, ಈ ಬಗ್ಗೆ ಮಾತನಾಡಲಾಗುವುದು. ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ ಮನವರಿಕೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಹಿಂದೇಟು ಹಾಕುವುದಿಲ್ಲ. ಒಂದು ವೇಳೆ ಸರಕಾರ ಖರೀದಿ ಮಿತಿಯನ್ನು ತೆಗೆಯದಿದ್ದರೆ, ನಾನೇ ಮುಂದೆ ನಿಂತು ರೈತರ ಪರವಾಗಿ ದೊಡ್ಡ ಮಟ್ಟದ ಹೋರಾಟಕ್ಕೆ ಇಳಿಯುತ್ತೇನೆ ಎಂದರು.
ಬಾದರ್ಲಿ, ಅಲಬನೂರು, ಮಾಡಿಸಿರವಾರ, ಗೋಮರ್ಸಿ, ಉದ್ನಾಳ್ ಸೇರಿದಂತೆ ಅನೇಕ ಗ್ರಾಮದ ರೈತರು ಇದ್ದರು.