ವಕೀಲರಿಗೆ ಪ್ರೋತ್ಸಾಹ ಧನ ನೀಡಲು ಮನವಿ
Team Udayavani, Jan 20, 2022, 6:25 PM IST
ರಾಯಚೂರು: ಕಿರಿಯ ವಕೀಲರಿಗೆ ಸಮರ್ಪಕ ಪ್ರೋತ್ಸಾಹಧನ ನೀಡುವುದು ಸೇರಿದಂತೆ ವಕೀಲರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ವಕೀಲರ ಸಂಘ ಮತ್ತು ಅಖೀಲ ಭಾರತ ವಕೀಲರ ಒಕ್ಕೂಟದಿಂದ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳು ಕಾನೂನು ಪದವಿ ಮುಗಿಸಿ ನೋಂದಣಿ ಮಾಡಿಕೊಂಡು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಕಿರಿಯ ವಕೀಲರಾಗಿ ಅಭ್ಯಾಸ ಆರಂಭಿಸಿದ್ದಾರೆ. ಆದರೆ, ಇವರಿಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಿಗಬೇಕಾದ ಪ್ರೋತ್ಸಾಹಧನ ಸರಿಯಾಗಿ ಸಿಗುತ್ತಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅನೇಕ ತಿಂಗಳಿಂದ ಹಣ ಮಂಜೂರಾಗಿಲ್ಲ. ಅಲ್ಲದೇ, ಈಚೆಗೆ ಆಯ್ಕೆ ಪ್ರಕ್ರಿಯೆ ಕೂಡ ನಡೆಯುತ್ತಿಲ್ಲ ಎಂದು ದೂರಿದರು. ಅಲ್ಪಸಂಖ್ಯಾತ ವಿಭಾಗದಲ್ಲಿ ಕೇವಲ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.
ಸುಮಾರು 25ಕ್ಕೂ ಹೆಚ್ಚು ಕಿರಿಯ ವಕೀಲರ ಪೈಕಿ ಮೂರು ಜನರನ್ನು ಆಯ್ಕೆ ಮಾಡಿದರೆ ಹೇಗೆ?. ಜೊತೆಗೆ ಈಗಾಗಲೇ ಆಯ್ಕೆಯಾದ ಕಿರಿಯ ವಕೀಲರಲ್ಲಿ ಅನೇಕರಿಗೆ ಹಣ ಸಿಗುತ್ತಿಲ್ಲ. ಇಲಾಖೆ ಅಧಿಕಾರಿಗಳು ಏನಾದರೂ ನೆಪ ಹೇಳಿ ಸಾಗ ಹಾಕುತ್ತಿದ್ದಾರೆ. ಬಡ ಅಭ್ಯರ್ಥಿಗಳಿಗೆ ಇದರಿಂದ ಸಾಕಷ್ಟು ಅನಾನುಕೂಲವಾಗುತ್ತಿದೆ. ವೃತ್ತಿ ಜೀವನಕ್ಕೆ ತೊಂದರೆ ಆಗುತ್ತಿದ್ದು, ಕೂಡಲೇ ಈ ಕುರಿತು ಗಮನ ಹರಿಸಬೇಕು. ಆಯ್ಕೆ ಪ್ರಕ್ರಿಯೆ ಆರಂಭಿಸುವ ಜತೆಗೆ ಈಗಾಗಲೇ ಆಯ್ಕೆಗೊಂಡವರಿಗೆ ಪ್ರೋತ್ಸಾಹಧನ ನೀಡುವಂತೆ ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ ನಾಯಕ ದಿನ್ನಿ, ಅಖೀಲ ಭಾರತ ವಕೀಲರ ಒಕ್ಕೂಟದ ಸಂಚಾಲಕ ಜಿ.ಎಸ್. ವೀರಭದ್ರಪ್ಪ, ಜಿಲ್ಲಾ ಖಜಾಂಚಿ ಪ್ರಸಾದ್ ಜೈನ್, ವಕೀಲರಾದ ಎಂ. ಸುಬ್ಬಣ್ಣ, ಮರಿಯಪ್ಪ, ಶಿವಕುಮಾರ ಮ್ಯಾಗಳಮನಿ, ಸೌಮ್ಯ, ಶಶಿಕಲಾ, ವೈಜನಾಥ್, ಯಲ್ಲಪ್ಪ, ದೀಪಿಕಾ, ಶೋಯಿಬ್, ರವಿ ಕುಮಾರ್, ಶ್ರೀದೇವಿ, ಮಲ್ಲರೆಡ್ಡಿ, ಲಿಂಗರಾಜ, ಸಿದ್ಧಲಿಂಗ, ಸಂತೋಷಕುಮಾರ್ ಇತರರಿದ್ದರು.