ಅಕ್ರಮ ನೀರಾವರಿ ತಡೆಗೆ ಗಡುವು
Team Udayavani, Jan 21, 2022, 2:32 PM IST
ಸಿಂಧನೂರು: ತಾಲೂಕು ಹಾಗೂ ಮಸ್ಕಿ ತಾಲೂಕಿನ ವ್ಯಾಪ್ತಿಗೆ ಬರುವ 55ನೇ ಉಪಕಾಲುವೆ ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ತಡೆಯಬೇಕು. ವಾರದಲ್ಲಿ ತೆರವು ಕಾರ್ಯಾಚರಣೆ ನಡೆಸದಿದ್ದರೆ, ಅಧಿಕಾರಿಗಳ ಹೋರಾಟಕ್ಕೆ ಇಳಿಯಲಾಗುವುದು ಎಂದು ಸಿಪಿಐಎಂಎಲ್ ರೆಡ್ಸ್ಟಾರ್ ಪಾರ್ಟಿ ಬ್ಯುರೋ ಸದಸ್ಯ ಆರ್.ಮಾನಸಯ್ಯ ಎಚ್ಚರಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 55ನೇ ಉಪಕಾಲುವೆ ಮೇಲ್ಭಾಗದಲ್ಲಿ ಪಂಪ್ ಸೆಟ್ ಅಳವಡಿಸಿ, ಕಾಲುವೆಗೆ ರಂಧ್ರ ಹಾಕಿ ಪೈಪ್ ಜೋಡಿಸಿ ಅಕ್ರಮವಾಗಿ 4 ಸಾವೊರ ಎಕರೆ ಜಮೀನಿಗೆ ನೀರು ಪಡೆಯಲಾಗುತ್ತಿದೆ. ಇದರಿಂದ ಕೆಲಭಾಗದ ಜಮೀನಿಗೆ ನೀರು ತಲುಪುತ್ತಿಲ್ಲ. ಇದನ್ನು ತಪ್ಪಿಸುವಂತೆ ರೈತ ಮುಖಂಡ ಅಮೀನ್ಪಾಷಾ ದಿದ್ದಗಿ, ಲೋಕಾಯುಕ್ತ ಕೋರ್ಟ್ನ ಮೊರೆ ಹೋಗಿದ್ದರು. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕೋರ್ಟ್ ಆದೇಶ ಹೊರಡಿಸಿದೆ. ಆದರೂ, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕೋರ್ಟ್ ನೀಡಿದ 6 ತಿಂಗಳ ಅವಕಾಶ ಮುಗಿದು, 13 ದಿನ ಕಳೆದಿದೆ. ಆದರೂ, ಅಧಿ ಕಾರಿಗಳು ನಿದ್ರೆಯಲ್ಲಿದ್ದಾರೆ. ಕೂಡಲೇ ಎಚ್ಚೆತ್ತುಕೊಳ್ಳಬೇಕು. ಒಂದು ವಾರದಲ್ಲೇ ಎಲ್ಲ ಅಕ್ರಮ ನೀರಾವರಿ ತೆರವುಗೊಳಿಸಿ, ಕೆಳಭಾಗದ 17 ಸಾವಿರ ಎಕರೆಗೆ ಕಾಲುವೆ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮಿನ್ಪಾಷಾ ದಿದ್ದಗಿ, ಸಿಪಿಐಎಂಲ್ ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ಗಂಗಾಧರ, ರೈತ ಮುಖಂಡರಾದ ರಮೇಶಪ್ಪ ಸಾಹುಕಾರ ದಿದ್ದಗಿ, ಮಾಬುಸಾಬ್ ಬೆಳ್ಳಟ್ಟಿ, ಮಹಾಂತೇಶ ನಾಯಕ, ಬಾಗೋಡೆಪ್ಪ, ಶಿವಮೂರ್ತೆಪ್ಪ, ರುಕ್ಮಿಣೆಮ್ಮ ಸೇರಿದಂತೆ ಇತರರು ಇದ್ದರು.