ಶಿಸ್ತು-ಸಮಯ ಪಾಲನೆ ಅಗತ್ಯ
Team Udayavani, Dec 20, 2021, 3:29 PM IST
ಗುರುಮಠಕಲ್: ವಿದ್ಯಾರ್ಥಿಗಳ ಜೀವನ ಬಂಗಾರ ಜೀವನವಾಗಿದೆ. ಯಶಸ್ಸು ಪಡೆಯಲು ಶಿಸ್ತು ಮತ್ತು ಸಮಯ ಪಾಲನೆ ಮಾಡಬೇಕು ಎಂದು ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಸಲಹೆ ನೀಡಿದರು.
ಪಟ್ಟಣದ ಚೈತನ್ಯ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಪ್ರಥಮ ವರ್ಷದ ಬಿ.ಸ್ಸಿ, ಬಿ.ಎ ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೇ ಆದಂತ ಪ್ರಾಮುಖ್ಯತೆ ಇದೆ. ಅದನ್ನು ನೀಡಲೇಬೇಕು. ಶಿಸ್ತು ಮತ್ತು ಸಮಯದ ಮಹತ್ವವನ್ನು ಯಾರು ಸರಿಯಾಗಿ ತಿಳಿದಿರುತ್ತಾರೆಯೋ ಅವರು ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ಹೋಗುತ್ತಾರೆ. ಅಮೂಲ್ಯ ಸಮಯದ ಸದ್ಭಳಕೆ ಹಾಗೂ ಸಮಯವನ್ನು ನ್ಯಾಯೋಜಿತವಾಗಿ ಉಪಯೋಗಿಸಿಕೊಳ್ಳುವ ಚಾಣಾಕ್ಷತೆ ಹೊಂದಿರುತ್ತಾನೆ ಎಂದರು.
ಸಂಸ್ಥೆ ಅಧ್ಯಕ್ಷ ಎಂ.ಬಿ. ನಾಯಕಿನ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ರಾಜೇಶ್ವರ ರೆಡ್ಡಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಪಾಪಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಜೆಡಿಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಅವುಂಟಿ, ತಾಲೂಕು ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ ಆನಂದ ಬೋಯಿನ್, ನಾಗನಾಥ ರೆಡ್ಡಿ, ಜ್ಞಾನೇಶ್ವರ ರೆಡ್ಡಿ, ನವಾಜ ರೆಡ್ಡಿ, ರಮೇಶ ಚವ್ಹಾಣ, ರಾಮಾಂಜನೇಯಲು, ನವಾಜ್, ನಾಗೇಶ, ಸಾವಿತ್ರಮ್ಮ, ಕವಿತಾ, ರವಿಕುಮಾರ, ಸೌಮ್ಯ ಇದ್ದರು.