ಕುಡಿವ ನೀರು ನೀಡುವುದು ಪುಣ್ಯ ಕಾರ್ಯ
ಸಮಾಜಪರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸದಾ ತೊಡಗಬೇಕು.
Team Udayavani, Apr 20, 2021, 6:39 PM IST
ರಾಯಚೂರು: ಪ್ರತಿಯೊಂದು ಜೀವ ಸಂಕುಲಕ್ಕೂ ನೀರು ಜೀವಾಳವಿದ್ದಂತೆ. ನೀರನ್ನು ಕೊಡುವವರು ಸ್ವರ್ಗ ಸೇರುತ್ತಾರೆ ಎಂಬ ವಾಡಿಕೆ ಇದೆ. ವಿಶ್ವವಿದ್ಯಾಲಯದ ಜೀವಾಳ ಎತ್ತಿ ಹಿಡಿಯುವ ಒಂದು ಮಹತ್ತರ ಕಾರ್ಯ ಇಲ್ಲಿನ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಮಾಡಿದ್ದಾರೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಹರೀಶ ರಾಮಸ್ವಾಮಿ ಹರ್ಷ ವ್ಯಕ್ತಪಡಿಸಿದರು.
ರಾಯಚೂರು ವಿವಿ ಆವರಣದಲ್ಲಿ ಅರ್ಥಶಾಸ್ತ್ರ ವಿಭಾಗದ ಸ್ಥಾಪಿಸಿದ ಕುಡಿವ ನೀರಿನ ಅರವಟಿಗೆ ಚಾಲನೆ ನೀಡಿ ಮಾತನಾಡಿದರು. ರಾಯಚೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಪಕ್ಷಿಗಳಿಗೆ ನೀರಿನ ದಾಹ ತೀರಿಸುವ ಮಹತ್ತರ ಕಾರ್ಯ ಮಾಡಿದ್ದರು. ಈಗ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಂದ ವಿವಿ ಆವರಣದಲ್ಲಿ ಶುದ್ಧ ಕುಡಿವ ನೀರಿನ ಅರವಟಿಗೆ ಸ್ಥಾಪಿಸಿರುವುದು ಉತ್ತಮ ಕಾರ್ಯ. ಕೇವಲ ಅಧ್ಯಯನವೊಂದೆ ಅಲ್ಲದೇ ಇಂಥ ಸಮಾಜಪರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸದಾ ತೊಡಗಬೇಕು. ಜಿಪಂ ಸಹಯೋಗದಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಪಡೆಯುವ ನಿಟ್ಟಿನಲ್ಲಿ ವಿವಿ ಕೆಲಸ ಮಾಡುತ್ತಿದೆ ಎಂದರು.
ಕುಲಸಚಿವ ಪ್ರೊ| ವಿಶ್ವನಾಥ ಎಂ. ಮಾತನಾಡಿ, ಯಾವುದೇ ಕೆಲಸ ಆರಂಭಿಸುವುದು ಮುಖ್ಯವಲ್ಲ. ಅದನ್ನು ನಿರಂತರವಾಗಿ ನಡೆಸಿಕೊಂಡು ಹೋಗುವುದು ಮುಖ್ಯ. ಇಂದು ಶುರುವಾದ ಈ ಕಾರ್ಯ ಮುಂದೆಯೂ ನಡೆದುಕೊಂಡು ಹೋಗಬೇಕು. ಮುಂಬರುವ ವಿದ್ಯಾರ್ಥಿಗಳಿಗೆ ಇದು ಮಾದರಿಯಾಗಿರಲಿ. ಇದರ ಜತೆಗೆ ಬೇರೆ-ಬೇರೆ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಬೇಕು ಎಂದರು. ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಪ್ರೊ| ಪಾರ್ವತಿ ಸಿ.ಎಸ್, ಪ್ರೊ| ನುಸ್ರತ್ ಫಾತೀಮಾ, ಪ್ರೊ| ಪಿ.ಭಾಸ್ಕರ್, ಡಾ| ಜಿ.ಎಸ್. ಬಿರಾದಾರ ಹಾಗೂ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.