ವಿದ್ಯಾರ್ಥಿಗಳಿಗೆ ಉದ್ಯೋಗಾರ್ಹ ಕೌಶಲ ಅತ್ಯವಶ್ಯ: ಪ್ರೊ| ಹರೀಶ
Team Udayavani, Jan 6, 2022, 11:53 AM IST
ರಾಯಚೂರು: ಉದ್ಯೋಗಾರ್ಹ ಕೌಶಲ ಅಭಿವೃದ್ಧಿಯು ಇಂದಿನ ಪೀಳಿಗೆಗೆ ಅವಶ್ಯಕ. ವಿವಿಯ ಅಪೇಕ್ಷಿತ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗಾಧಾರಿತ ಶಿಕ್ಷಣ ನೀಡಲು ರಾಯಚೂರು ವಿಶ್ವವಿದ್ಯಾಲಯ ಸದಾ ಸಿದ್ಧವಾಗಿದೆ ಎಂದು ವಿವಿಯ ಕುಲಪತಿ ಪ್ರೊ| ಹರೀಶ ರಾಮಸ್ವಾಮಿ ಅಭಿಪ್ರಾಯ ಪಟ್ಟರು.
ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾಭ್ಯಾಸಕ್ಕೆ ಕೊಟ್ಟ ಪ್ರಾಮುಖ್ಯತೆ ಶ್ಲಾಘನೀಯವಾಗಿದ್ದು, ರಾಯಚೂರು ವಿಶ್ವವಿದ್ಯಾಲಯದಲ್ಲಿ 13 ಕಾರ್ಯಕ್ರಮಗಳು ಆನ್ಲೈನ್, ಆಫ್ಲೈನ್ ಮೂಲಕ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳನ್ನು ಉದ್ಯೋಗ ಶೀಲರನ್ನಾಗಿಸುವ ಪದ್ಧತಿಯೇ ಈ ರಾಷ್ಟ್ರೀಯ ಶಿಕ್ಷಣ ನೀತಿಯಾಗಿದೆ ಎಂದರು.
ಮುಕ್ತವಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಸಮಕಾಲಿನ ಬದುಕಿಗೆ ಅಗತ್ಯವಾದ ತಂತ್ರಜ್ಞಾನ ಕಲಿಕೆಗೆ ಸಾಕಷ್ಟು ಅವಕಾಶಗಳು ಎನ್ಇಪಿಯಲ್ಲಿವೆ. ಮುಖ್ಯವಾಗಿ ಮಾನವೀಯ ಮೌಲ್ಯಗಳು, ಶಿಸ್ತು, ಸಮಯ ಪ್ರಜ್ಞೆ, ಆಯೋಜನಾ ಪದ್ಧತಿ ಹೊಂದಿದಾಗ ಶಿಕ್ಷಣದಲ್ಲಿ ಅಂದುಕೊಂಡ ಗುರಿ ತಲುಪಲು ಸಾಧ್ಯ ಎಂದರು.
ಬೆಂಗಳೂರಿನ ಕರ್ನಾಟಕ ಉತ್ಛ ಶಿಕ್ಷಣ ಮಂಡಳಿ ವಿಶೇಷಾಧಿಕಾರಿ ಡಾ| ಎಂ.ಜಯಪ್ಪ ಮಾತನಾಡಿ, ಎನ್ ಇಪಿಯು ಸಾಕಷ್ಟು ಆತಂಕ ಸೃಷ್ಟಿಸಿದ್ದರೂ ಪ್ರಸ್ತುತ ಅದನ್ನು ಅಳವಡಿಸಿಕೊಳ್ಳವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ಮೊದಲಿಗಿಂತ ಹೊಸ ಮಾದರಿಯಲ್ಲಿ ಪದವಿ ವ್ಯಾಸಂಗ ಮಾಡಬಹುದು ಎಂದರು.
ರಾಯಚೂರು ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ| ಯರಿಸ್ವಾಮಿ ಎಂ. ಮಾತನಾಡಿ, ಕಾರ್ಯಾಗಾರದ ಗುರಿ, ಉದ್ದೇಶಗಳ ಕುರಿತು ವಿವರಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅವಶ್ಯವಾಗಿ ತಿಳಿದು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ರಾಯಚೂರು ವಿವಿ ಕುಲಸಚಿವ ಪ್ರೊ| ವಿಶ್ವನಾಥ ಎಂ. ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕ ಅನಿಲ್ ಅಪ್ರಾಳ್ ನಿರೂಪಿಸಿದರು. ಸಮಾಜ ಕಾರ್ಯ ವಿಭಾಗದ ಡಾ| ರಶ್ಮೀರಾಣಿ ಅಗ್ನಿಹೋತ್ರಿ ಪ್ರಾರ್ಥಿಸಿದರು. ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ| ಫತ್ತೇಪುರ ವಂದಿಸಿದರು.