ಜೀವನದಲ್ಲಿ ಉತ್ತಮ ಗುರಿ ಇರಲಿ
Team Udayavani, Nov 25, 2021, 3:14 PM IST
ಹುಣಸಗಿ: ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳದೆ ಸತತ ಅಧ್ಯಯನ ಜತೆಗೆ ಉತ್ತಮ ಗುರಿ ಇರಬೇಕು ಎಂದು ಡಿವೈಎಸ್ಪಿ ಡಾ| ದೇವರಾಜ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಾಮಾಜಿಕ ಸಾಮರಸ್ಯ ವೇದಿಕೆ ಹುಣಸಗಿ ವತಿಯಿಂದ ಭಕ್ತ ಕನಕದಾಸರ ಜಯಂತಿ ನಿಮಿತ್ತ ದೇಶ ಭಕ್ತರ ಇತಿಹಾಸ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿದರು ಕಡಿಮೆ. ಹೀಗಾಗಿ ದೇಶದಲ್ಲಿನ ಪ್ರಚಲಿತ ವಿದ್ಯಮಾನದ ಬಗ್ಗೆ ಹಾಗೂ ಮಹಾತ್ಮರ ಜೀವನ ಚರಿತ್ರೆಯು ತಿಳಿದುಕೊಂಡಾಗ ಉತ್ತಮ ಪ್ರಜೆಯಾಗಬಹುದು ಎಂದರು.
ಸಾಮಾಜಿಕ ಸಾಮರಸ್ಯ ವೇದಿಕೆ ಮುಖಂಡ ಡಾ| ವೀರಭದ್ರಗೌಡ ಹೊಸಮನಿ ಮಾತನಾಡಿ, ವಿದ್ಯಾರ್ಥಿಗಳು ಸಮಯ ಮತ್ತು ಕಾಲ ವ್ಯರ್ಥ ಮಾಡಬಾರದು ಎಂದರು.
ಸಿಪಿಐ ದೌಲತ್ ಎನ್.ಕೆ., ಪಿಎಸ್ಐ ಚೇತನಕುಮಾರ ಸೌದಿ, ಚನ್ನಬಸಯ್ಯ ಹಿರೇಮಠ, ವಿ.ಎಸ್. ಹಿರೇಮಠ, ವಿ.ಎಸ್. ಬಿರಾದಾರ, ಟಿ.ಸಿ. ಸಜ್ಜನ್, ಸಾಮಾಜಿಕ ಸಾಮರಸ್ಯ ವೇದಿಕೆ ಸದಸ್ಯ ಬಸವರಾಜ ಮೇಲಿನಮನಿ, ರುದ್ರಗೌಡ ಬಿರಾದಾರ, ಮಹಾದೇವಪ್ಪ ಅರಕೇರಾ ಸೇರಿದಂತೆ ಇತರರಿದ್ದರು.