ಜನರಿಗೆ ಇಂದಿರಾ ಕ್ಯಾಂಟೀನ್ ಆಸರೆ: ಕಡಿಮೆ ಹಣದಲ್ಲಿ ಉಪಾಹಾರ-ಊಟ ಲಭ್ಯ
Team Udayavani, Sep 11, 2022, 5:39 PM IST
ದೇವದುರ್ಗ: ಗ್ರಾಮೀಣ ಭಾಗದ ವಸತಿ ನಿಲಯ ವಂಚಿತ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ಆಸರೆ ಎಂಬಂತಾಗಿದೆ. ಹತ್ತನ್ನೇರಡು ಕಿ.ಮೀ. ದೂರದಿಂದ ಬೆಳಿಗ್ಗೆ ಎಂಟಕ್ಕೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಉಪಾಹಾರ ಸಮಸ್ಯೆ ಆಗುತ್ತಿರುವ ಹಿನ್ನೆಲೆ ಇಂದಿರಾ ಕ್ಯಾಂಟೀನ್ ತಿಂಡಿಗೆ ಅನುಕೂಲವಾಗಿದೆ.
ಮುಂಡರಗಿ, ಮುಕ್ಕನಾಳ, ಮುಂಡರಗಿ ತಾಂಡ, ಅಮರಾಪುರು, ವೆಂಗಳಪುರು, ಕರಿಗುಡ್ಡ, ನವಿಲಗುಡ್ಡ, ದೇವತಗಲ್ ಸೇರಿದಂತೆ ಇತರೆ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ಆಸರೆ ಆಗಿದೆ. ಬೆಳಗ್ಗೆ ಏಳಕ್ಕೆ ಕ್ಯಾಂಟೀನ್ ಆರಂಭವಾಗುತ್ತಿದ್ದಂತೆ ಬಹುತೇಕ ವಿದ್ಯಾರ್ಥಿಗಳು ಕಾದು ನಿಂತಿರುತ್ತಾರೆ. 5 ರೂ. ದರಲ್ಲಿ ಉಪಾಹಾರ ಸೇವಿಸಿ ಕಾಲೇಜಿಗೆ ತೆರಳುತ್ತಾರೆ. ಕಾಲೇಜು ಬಿಟ್ಟ ನಂತರ 5 ರೂ. ಕೊಟ್ಟು ಮಧ್ಯಾಹ್ನ ಅನ್ನ ಸಾಂಬರ್ ಊಟ ಸೇವಿಸಿ ಸ್ವಗ್ರಾಮಕ್ಕೆ ತೆರಳುತ್ತಾರೆ.
ವಿವಿಧ ವಸತಿ ನಿಲಯ ಸೌಲಭ್ಯ ವಂಚಿತಗೊಂಡಿರುವ ಹಲವು ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ವರ ಎನ್ನುವಂತಾಗಿದೆ. ಸರಕಾರಿ ಇಲಾಖೆ ಅಧಿ ಕಾರಿಗಳು, ಸಿಬ್ಬಂದಿಗಳು ಮಧ್ಯಾಹ್ನ ಊಟ ಮಾಡಲು ಆಗಮಿಸುತ್ತಾರೆ. ಸಭೆ, ಸಮಾರಂಭ, ಜಯಂತಿ ಆಚರಣೆ ವೇಳೆ ಗ್ರಾಮೀಣ ಭಾಗದಿಂದ ಬಂದಿರುವಂತ ಬಹುತೇಕರು ಇಂದಿರಾ ಕ್ಯಾಂಟೀನ್ ಅವಲಂಬಿತರಾಗಿದ್ದಾರೆ. ಸರಕಾರಿ ಇಲಾಖೆಯಲ್ಲಿ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುವ ಜನಸಾಮಾನ್ಯರು ಕ್ಯಾಂಟೀನ್ ಮೊರೆ ಹೋಗುತ್ತಿದ್ದಾರೆ.
–ನಾಗರಾಜ ತೇಲ್ಕರ್