15ರಿಂದ ಮಂತ್ರಾಲಯ ಶ್ರೀ ಪೀಠಾರೋಹಣ ದಶಮಾನೋತ್ಸವ
Team Udayavani, Mar 10, 2023, 6:25 AM IST
ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಪೀಠಾರೋಹಣದ ದಶಮಾನೋತ್ಸವ ಕಾರ್ಯಕ್ರಮವನ್ನು ಮಾ.15, 16 ಮತ್ತು 17ರಂದು ಹಮ್ಮಿಕೊಳ್ಳಲಾಗಿದೆ.
15ರಂದು ಎನ್ಜಿಒ ಕಾಲೋನಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬೆಳಗ್ಗೆ 9ಗಂಟೆ, ಜವಾಹರ ನಗರ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಾಮೂಹಿಕ ಪಾದಪೂಜೆ ಹಾಗೂ ಮುದ್ರಾಧಾರಣೆ ನಡೆಯಲಿದೆ. ನಂತರ 10:30ಕ್ಕೆ ಶ್ರೀಗಳ ಸಾನ್ನಿಧ್ಯದಲ್ಲಿ ದಶಹೋಮಗಳ ಪೂರ್ಣಾಹುತಿ ಹಾಗೂ ಅವಭೃಥ ಸ್ನಾನ ಕಾರ್ಯಕ್ರಮ ನಡೆಯಲಿವೆ. ಸಂಜೆ 5:30ಕ್ಕೆ ಸಾವಿತ್ರಿ ಕಾಲೋನಿಯ ಶ್ರೀ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಪಂಡಿತ ಕೇಸರಿ ರಾಜಾ ಎಸ್.ಗಿರಿಯಾಚಾರ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ. ನಂತರ ಪಂಡಿತರಿಂದ ಉಪನ್ಯಾಸ, ಶ್ರೀಗಳಿಗೆ ತಲಾಭಾರ ಕಾರ್ಯಕ್ರಮ ಆಯೋಜಿಸಲಾಗಿದೆ.
16ರಂದು ಬೆಳಗ್ಗೆ 9ಗಂಟೆಗೆ ದೇವರ ಕಾಲೋನಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಹಾಗೂ 10 ಗಂಟೆಗೆ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಸಾಮೂಹಿಕ ಪಾದಪೂಜೆ ಮುದ್ರಾಧಾರಣೆ ನಡೆಯಲಿದೆ. ಸಂಜೆ 5.30ಕ್ಕೆ ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮ, ಶ್ರೀಪಾದಂಗಳವರಿಗೆ ತುಲಾಭಾರ ನಡೆಯಲಿದೆ. 17ರ ಬೆಳಗ್ಗೆ 9ಗಂಟೆಗೆ ಕೃಷ್ಣದೇವರಾಯ ಕಾಲೋನಿ, 10ಕ್ಕೆ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಸಾಮೂಹಿಕ ಪಾದಪೂಜೆ, ಮುದ್ರಾಧಾರಣೆ ನಡೆಯಲಿದೆ. ನಂತರ ಮೂಲ ರಾಮದೇವ ಮಹಾಪೂಜೆ ನಡೆಯಲಿದೆ. ವೆಂಕಟ ನರಸಿಂಹಾಚಾರ ಗುಡೆಬಲ್ಲೂರು ಅವರಿಂದ ಉಪನ್ಯಾಸ ನಡೆಯಲಿದೆ. ಸಂಜೆ 4 ಗಂಟೆಗೆ ಸುಶಮೀಂದ್ರ ವೃತ್ತದಿಂದ ಜೋಡು ವೀರಾಂಜನೇಯ ದೇವಸ್ಥಾನದವರೆಗೆ ಶ್ರೀಪಾದಂಗಳವರ ಭವ್ಯ ಶೋಭಾಯಾತ್ರೆ ನಡೆಯಲಿದೆ. ನಂತರ ಪಂಡಿತರಿಂದ ಉಪನ್ಯಾಸ, ಶ್ರೀಪಾದಂಗಳವರಿಗೆ ವಿಶೇಷ ತುಲಾಭಾರ ಹಾಗೂ ಪುಷ್ಪವೃಷ್ಟಿ ಕಾರ್ಯಕ್ರಮ ನಡೆಯಲಿದೆ.