ಎಚ್ ಡಿಕೆ ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತಾಡಲಿ: ಸಚಿವ ಪ್ರಹ್ಲಾದ ಜೋಶಿ
Team Udayavani, Jan 12, 2020, 12:45 PM IST
ರಾಯಚೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡುವುದು ಸೂಕ್ತ. ಗಲಭೆ ಸೃಷ್ಟಿಸುವ ಸರ್ಕಾರಗಳಿಗೆ ಜನ ಬೆಂಬಲಿಸುತ್ತಾರಾ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.
ಯರಮರಸ್ ವಿಐಪಿ ಸರ್ಕ್ಯೂಟ್ ಹೌಸ್ ನಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕುಮಾರಸ್ವಾಮಿ ಸಿಡಿ ಬಿಡುಗಡೆ ಬಗ್ಗೆ ಪೋಲಿಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕುಮಾರಸ್ವಾಮಿಯವರದ್ದು ಹಿಟ್ ಅಂಡ್ ರನ್ ನಡೆ. ಯಾರ ಮೇಲೆ ದಾಳಿ ಮಾಡಲು ಯಾರಿಗೂ ಹಕ್ಕಿಲ್ಲ. ಪೋಲಿಸರು ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಕ್ರಮ ಕೈಗೊಂಡರೆ ಅವರ ವಿರುದ್ಧ ನಿಲ್ಲುವುದು ಸರಿಯಲ್ಲ ಎಂದರು.
ಆಂಧ್ರದ ಕರ್ನೂಲ್ ಜಿಲ್ಲೆಯನ್ನು ರಾಜ್ಯಕ್ಕೆ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗಡಿ ವಿವಾದಗಳು ಬಹಳ ಇವೆ. ಕರ್ನೂಲ್ ರಾಜ್ಯಕ್ಕೆ ಸೇರಿದರೆ ಸಂತೋಷ. ಆದರೆ ಆಂಧ್ರ ಸರ್ಕಾರ ಕರ್ನೂಲ್ ಅಭಿವೃದ್ಧಿ ಕಡೆ ಗಮನ ಕೊಡುವುದು ಒಳಿತು ಎಂದರು.
ಸಿಎಎ ಕುರಿತು ನೋಟಿಫಿಕೇಷನ್ ಆಗಿದೆ. ಆದರೆ,ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಕಾಯ್ದೆ ವಿರೋಧಿಸಿ ದೇಶದಲ್ಲಿ ಹೋರಾಟ ಮಾಡುತ್ತಿವೆ.
ಪಾಕ್ ನ ಭಯೋತ್ಪಾದನೆ ಮುಖವನ್ನು ವಿಶ್ವದ ಮುಂದೆ ನಿಲ್ಲಿಸುವ ಕೆಲಸ ಯಶಸ್ವಿಯಾಗಿ ನಡೆದಿದೆ. ಪಾಕ್ ನಲ್ಲಿನ ಅಸಹಿಷ್ಣುತೆ ಹಾಗೂ ಸರ್ಕಾರ ಅಲ್ಪ ಸಂಖ್ಯಾತರ ಮೇಲಿನ ನಡೆಸಿರುವ ಧಾರ್ಮಿಕ ಅತ್ಯಾಚಾರವನ್ನು ಜಗತ್ತಿಗೆ ತೋರಿಸುವ ಉದ್ದೇಶ ನಮ್ಮ ಸರ್ಕಾರದ್ದಾಗಿದೆ ಎಂದರು.
ದೇಶಕ್ಕೆ ಲಕ್ಷಾಂತರ ಜನ ಅಕ್ರಮವಾಗಿ ನುಸುಳಿ ಬಂದಿದ್ದಾರೆ. ಅವರ ಬಗ್ಗೆ ಕಾಂಗ್ರೆಸ್ ಚಕಾರವೆತ್ತುತ್ತಿಲ್ಲ. ಅಲ್ಪಸಂಖ್ಯಾತರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಹರಿಹಾಯ್ದರು. ಯು.ಟಿ.ಖಾದರ್ ಅವರೇ ಕಾಯ್ದೆ ಜಾರಿಯಾದ ಮೇಲೆ ನಿಮಗೇನಾದರೂ ತೊಂದರೆ ಆಗಿದೆಯಾ ತಿಳಿಸಿ ಎಂದು ಪ್ರಶ್ನಿಸಿದರು.
ಭಾರತವನ್ನು ವಿರೋಧಿಸುವ ದೇಶಗಳ ಅಭಿಪ್ರಾಯ ಮತ್ತು ಕಾಂಗ್ರೆಸ್ ನಾಯಕರ ಅಭಿಪ್ರಾಯ ಒಂದೇ ಆಗಿದೆ. ಕಾಂಗ್ರೆಸ್ ನವರು ಸೋಲಿನಿಂದ ಕಂಗೆಟ್ಟಿದ್ದಾರೆ. ಮೋದಿ ವಿರೋಧ ಮಾಡುತ್ತ ದೇಶಕ್ಕೇ ಕೇಡು ಬಯಸುತ್ತಿದ್ದಾರೆ. ಇದು ಪೌರತ್ವ ಕೊಡುವ ಕಾನೂನೇ ವಿನಹ ಕಿತ್ತುಕೊಳ್ಳುವುದಲ್ಲ. ಇದರಿಂದ ದೇಶದ ಒಬ್ಬ ಪ್ರಜೆಗೂ ಸಮಸ್ಯೆಯಾಗದು ಎಂದರು.