ಕಲ್ಲಿದ್ದಿಲು ತ್ಯಾಜ್ಯ ವಿಲೇವಾರಿಯಲ್ಲಿ ನಿಯಮ ಉಲ್ಲಂಘನೆ
Team Udayavani, Apr 4, 2022, 2:18 PM IST
ರಾಯಚೂರು: ಅಗರವಾಲ್ ಬ್ರದರ್ಸ್ ಮತ್ತು ಕಂಪನಿ ಆರ್ಟಿಪಿಎಸ್ನಲ್ಲಿ ಸಂಗ್ರಹಿಸಿದ ಕಲ್ಲಿದ್ದಲು ತ್ಯಾಜ್ಯವನ್ನು ಟೆಂಡರ್ ನಿಯಮಾನುಸಾರ ಬಳಸದೇ ನಿಯಮ ಉಲ್ಲಂಘಿಸಿದ್ದು, ಕಂಪನಿ ವಿರುದ್ಧ ಸೂಕ್ರ ಕ್ರಮ ಜರುಗಿಸುವಂತೆ ಪ್ರಗತಿಪರ ಸಂಘಟನೆಯ ಒಕ್ಕೂಟದ ಸಂಚಾಲಕ ಶ್ರೀನಿವಾಸ ಕೊಪ್ಪರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ಯಾಜ್ಯ ಕಲ್ಲಿದ್ದಲು ಸರಬರಾಜು ಮಾಡುವುದಾಗಿ ಪ್ರತಿ ವರ್ಷವೂ ಮಹಾರಾಷ್ಟ್ರ ಮೂಲದ ಅಗರವಾಲ್ ಕಂಪೆನಿ ಟೆಂಡರ್ ನೀಡಲಾಗುತ್ತಿದೆ. ಇದರಲ್ಲಿ ಆರ್ಟಿಪಿಎಸ್ ಕಾರ್ಯ ನಿರ್ವಾಹಕ ಅಧಿಕಾರಿ ಪಾತ್ರವೂ ಇದೆ. ಆದರೆ, ಟೆಂಡರ್ ಪಡೆದ ಕಂಪೆನಿ ಕಲ್ಲಿದ್ದಲು ಬೇರೆ ಕಡೆ ಸರಬರಾಜು ಮಾಡಲು ಒಪ್ಪಂದ ಮಾಡಿಕೊಂಡರೂ ಸರಿಯಾಗಿ ವಿಲೇವಾರಿ ಮಾಡದ ಕಾರಣ ತ್ಯಾಜ್ಯ ಕಲ್ಲಿದ್ದಲು ಅಲ್ಲಿಯೇ ಉಳಿಯುತ್ತಿದೆ. ಅದು ಸ್ಥಳದಲ್ಲಿಯೇ ಸುಟ್ಟು ಬೂದಿಯಾಗುತ್ತಿದ್ದು, ಸುತ್ತಲಿನ ಜನರಿಗೆ ಸಮಸ್ಯೆಯಾಗುತ್ತಿದೆ ಎಂದರು.
2003-2008ರ ವರೆಗೆ ಆರ್ಟಿಪಿಎಸ್ನಲ್ಲಿ ಬಹಿರಂಗ ಮಾರಾಟ ಇತ್ತು. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿತ್ತು. 2016ರಲ್ಲಿ ಪ್ರತಿ ಟನ್ಗೆ 2,446 ರೂ.ಗೆ ಸರಬರಾಜು ಮಾಡಲು ಟೆಂಡರ್ ಆಗುತ್ತಿತ್ತು. ಆದರೆ, ಈಗ ಅಗರವಾಲ್ ಕಂಪನಿ ಕೇವಲ 1,150 ಇಳಿಕೆ ಮಾಡಿದೆ. ತ್ಯಾಜ್ಯ ಕಲ್ಲಿದ್ದಲು ಹೊರಗೆ ಸರಬರಾಜು ಮಾಡದೇ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ ಎಂದು ಆಪಾದಿಸಿದರು.
ಪ್ರತಿ ವರ್ಷ ಟೆಂಡರ್ ನಿಯಮನುಸಾರ 2 ಲಕ್ಷ ಟನ್ ಎತ್ತುವಳಿ ಮಾಡದಿದ್ದರೆ ಟೆಂಡರ್ ಠೇವಣಿ ಮಾಡಿದ ಮುಟ್ಟುಗೋಲು ಮಾಡಲಾಗುವುದು ಎಂದು ಷರತ್ತು ವಿಧಿಸಿದ್ದಾರೆ. ನಿಯಮ ಉಲ್ಲಂಘಿಸಿದ ಅಗರವಾಲ್ ಕಂಪನಿ, ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮುಖಂಡ ಆಂಜನೇಯ ಕುರುಬದೊಡ್ಡಿ, ಹುಸೇನ್ ಬಾಷಾ ಪಲಕನಮರಡಿ, ಚಂದ್ರಶೇಖರ ಭಂಡಾರಿ, ನರಸಿಂಹ ಗೋಷ್ಠಿಯಲ್ಲಿದ್ದರು.