600 ಮಂದಿಗೆ ಆಹಾರ ಕಿಟ್ ವಿತರಣೆ
Team Udayavani, Apr 26, 2020, 1:13 PM IST
ಕನಕಪುರ: ಸಾಮಾಜಿಕ ಅಂತರ ಕಾಪಾಡಿಕೊಂಡು ಗೊಂದಲಕ್ಕೆ ಕಾರಣವಾಗದಂತೆ ಆಹಾರ ಪದಾರ್ಥಗಳನ್ನು 600 ಮಂದಿಗೆ ವಿತರಿಸಿದ ಕೀರ್ತಿಗೆ ತಾಲೂಕಿನ ಕೋಡಿಹಳ್ಳಿ ಗ್ರಾಪಂ ಪಾತ್ರವಾಗಿದೆ. ಗ್ರಾಪಂನ ಈ ಮಾದರಿ ಕಾರ್ಯಕ್ಕೆ ಸ್ವಯಂ ಜಿಪಂ ಸಿಇಒ ಇಕ್ರಂ ಟ್ವೀಟರ್ ಮೂಲಕ ಪ್ರಶಂಸಿದ್ದಾರೆ.
ಕೋಡಿಹಳ್ಳಿ ಮಾರ್ವಾಡಿಗಳ ಸಂಘದ ಸದಸ್ಯರು ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ಸಹಾಯ ಮಾಡುವ ಮನಸ್ಸಿದೆ ಎಂದು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆದಿದ್ದರು. ಪಡಿತರ ವ್ಯವಸ್ಥೆಯಿಂದ ಸರ್ಕಾರ ಹೇಗೂ ಅಕ್ಕಿ, ರಾಗಿ ಕೊಟ್ಟಿದೆ. ಆದರೆ ಅಡುಗೆಗೆ ಬೇಕಾದ ಸಾಂಬರ್ ಪದಾರ್ಥಗಳು, ಉಪ್ಪು, ಎಣ್ಣೆ, ಗೋದಿ ಇತ್ಯಾದಿ ಪದಾರ್ಥಗಳಿಗೆ ನಾಗರಿಕರು ಅಂಗಡಿಗಳಿಗೆ ಹೋಗಲೇ ಬೇಕಿರುವುದನ್ನು ಮನಗಂಡು 10 ಅವಶ್ಯ ಪದಾರ್ಥಗಳ ಕಿಟ್ಗಳನ್ನು ಪಂಚಾಯ್ತಿ ಅಧಿಕಾರಿಗಳು ಸಿದ್ಧಪಡಿಸಿಕೊಂಡರು. ಕಿಟ್ ಗಳಿಗೆ ಬೇಕಾದ ಪದಾರ್ಥಗಳಿಗೆ ಮಾವಾರ್ಡಿಗಳ ಸಂಘದ ಸದಸ್ಯರ ಕೊಡುಗೆಯ ಜೊತೆಗೆ ತಾವು ಸಂಪನ್ಮೂಲ ಕ್ರೋಢೀಕರಿಸಿದ ಪಂಚಾಯಿತಿ ಅಧಿಕಾರಿಗಳು ಕೋಡಿಹಳ್ಳಿ ಶಾಲೆ ವಿಶಾಲ ಮೈದಾನದಲ್ಲಿ ಪ್ರತಿ ವ್ಯಕ್ತಿ ಕನಿಷ್ಠ 5 ಮೀ. ಅಂತರ ಕಾಯ್ದುಕೊಳ್ಳುವಂತೆ ಗುರುತು ಹಾಕಿ ಫಲಾನುಭವಿಗಳನ್ನು ವ್ಯವಸ್ಥಿತವಾಗಿ ಕೂರಿಸಿದರು. ವಿಧವೆಯರು, ಅಂಗವಿಕಲರು, ಹೊರ ರಾಜ್ಯದ ಕಾರ್ಮಿಕರು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳು, ಪರಿಶಿಷ್ಟ ಜಾತಿ, ಪಂಗಡಗಳ ಕುಟುಂಬಗಳನ್ನು ಹೀಗೆ ಸುಮಾರು 600 ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ.
ಸಂಸದ ಡಿ.ಕೆ.ಸುರೇಶ್, ಆ ಭಾಗದ ಜಿಪಂ ಸದಸ್ಯ ಜಯರತ್ನ ರಾಜೇಂದ್ರ, ತಾಪಂ ಉಪಾಧ್ಯಕ್ಷೆ ಅನ್ನಪೂರ್ಣ ಸೊಮಶೇಖರ್, ಸದಸ್ಯ ರಮೇಶ್, ಕೆ.ಎಸ್.ಲೋಕೇಶ್, ಪಿಡಿಒ ಎಸ್.ಎಂ.ಕೃಷ್ಣಮೂರ್ತಿ ಮತ್ತು ಮಾರ್ವಾಡಿ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸ್ಥಳೀಯ ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಸಿಬ್ಬಂದಿ ಶ್ರಮ ಗಣ್ಯರು ಶ್ಲಾಘಿಸಿದ್ದಾರೆ.