ಜಿಪಂಗೆ ಅಶೋಕ್ ನೂತನ ಅಧ್ಯಕ್ಷ
Team Udayavani, Sep 11, 2020, 12:35 PM IST
ರಾಮನಗರ: ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳ ಮೂಲಕ ಮುಂಜಾಗ್ರತೆ ಕ್ರಮ ಕೈಗೊಂಡುಕೋವಿಡ್ ಸೋಂಕು ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಪಂ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಎಚ್.ಎನ್. ಅಶೋಕ್ ತಿಳಿಸಿದರು.
ನಗರದ ಜಿಪಂ ಭವನದಲ್ಲಿ ಗುರುವಾರ ನಡೆದ ವಿಶೇಷ ಸಭೆಯಲ್ಲಿ ಜಿಪಂ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತ ನಾಡಿದರು. ವಿಶ್ವವನ್ನೇ ವ್ಯಾಪಿಸಿರುವ ಕೋವಿಡ್ ಸೋಂಕು ಜಿಲ್ಲೆಯಲ್ಲೂ ಇನ್ನು ಬಾಧಿಸುತ್ತಿದೆ. ಜಿಪಂ ವತಿಯಿಂದ ಸರ್ಕಾರಿ ಇಲಾಖೆಗಳ ಮೂಲಕ ಏನೇನು ಸಾಧ್ಯವೋ ಅವನ್ನೆಲ್ಲಾ ಅನುಸರಿಸಿ ಕೋವಿಡ್ ಸೋಂಕು ಹರಡುವ ವಿಚಾರದಲ್ಲಿ ಕ್ರಮವಹಿಸುವುದಾಗಿ ತಿಳಿಸಿದರು.
ಮನೆ ಬಾಗಿಲಿಗೆ ಜಿಪಂ ಸೇವೆ: ಜಿಪಂ ಅಧ್ಯಕ್ಷ ಸ್ಥಾನ ಗುರುತರ ಜವಾಬ್ದಾರಿ ಸ್ಥಾನ. ಕುಡಿಯುವ ನೀರು, ರಸ್ತೆ ಸೇರಿ ಮೂಲ ಸೌಕರ್ಯ ಒದಗಿಸುವುದು ತಮ್ಮ ಆದ್ಯತೆ. ಇದಕ್ಕೆ ಜಿಪಂ ಎಲ್ಲಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವಿಶ್ವಾಸಗಳಿಸಿ ಕಾರ್ಯಸಾಧಿಸುವುದಾಗಿ ತಿಳಿಸಿದರು. ಜಿಪಂ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವುದು ತಮ್ಮ ಇಚ್ಚೆ. ಒಟ್ಟಾರೆ ಹಾಲಿ ಜಿಪಂ ಉಳಿದ ಅವಧಿಗೆ ಉತ್ತಮ ಆಡಳಿತ ನೀಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು. ಕೃತಜ್ಞತೆ: ಜಿಪಂ ಅಧ್ಯಕ್ಷರಾಗಿ ತಾವು ಅವಿರೋಧ ಆಯ್ಕೆಯಾಗಲು ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ , ಜಿಪಂನ ಎಲ್ಲಾ ಸದಸ್ಯರ ಸಹಕಾರವೇ ಕಾರಣ ಎಂದು ತಿಳಿಸಿದ ಅವರು ಕೃತಜ್ಞತೆ ಸಲ್ಲಿಸಿದರು.
ಎಂಎಲ್ಸಿ ಎಸ್.ರವಿ, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಜಿಪಂ ಸದಸ್ಯರು, ಮಾಗಡಿ ತಾಲೂಕಿನ ಜನಪ್ರತಿನಿಧಿಗಳು, ಅಭಿಮಾನಿಗಳು ನೂತನ ಅಧ್ಯಕ್ಷ ಎಚ್.ಎನ್.ಅಶೋಕ್ರನ್ನು ಅಭಿನಂದಿಸಿದರು.
1 ನಾಮಪತ್ರ ಸಲ್ಲಿಕೆ ಆಗಿತ್ತು : ಎಚ್.ಬಸಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರ ಆಯ್ಕೆಗಾಗಿ ಗುರುವಾರ ಜಿಪಂ ವಿಶೇಷ ಸಭೆಆಯೋಜಿಸಲಾಗಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ನಿಗದಿಯಂತೆ ಬೆಳಗ್ಗೆ 9ಕ್ಕೆ ರಾಮ ನಗರ ತಾಲೂಕು ಕೂಟಗಲ್ ಜಿಪಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಚ್.ಎನ್.ಅಶೋಕ್ ಹೊರತುಪಡಿಸಿ ಇನ್ಯಾರು ನಾಮಪತ್ರ ಸಲ್ಲಿಸಲಿಲ್ಲ.ಹೀಗಾಗಿ ನಾಮಪತ್ರ ಪರಿಶೀಲನೆ, ನಾಮಪತ್ರವಾಪಸ್ಸು ಪಡೆಯುವ ಸಮಯದ ನಂತರ ಮಧ್ಯಾಹ್ನ 12ಕ್ಕೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಅವರು ಎಚ್.ಎನ್.ಅಶೋಕ್ ಅವರನ್ನು ಅವಿರೋಧ ಆಯ್ಕೆ ಎಂದು ಘೋಷಿಸಿದರು. 20 ಮಂದಿ ಜಿಪಂ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು. ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಜಿಪಂ ಉಪಕಾರ್ಯದರ್ಶಿ ಉಮೇಶ್, ಜಿಪಂ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.